Sunday 19 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 24: 62-69

 ಸಾತ್ಯಕಿಯ ಒಡಗೂಡಿದ ಶ್ರೀಕೃಷ್ಣ ಉತ್ಕೃಷ್ಟವಾದ ರಥವೇರಿ ಕುಳಿತ,

ಪಾಂಡವರು ವಿರಾಟ ದ್ರುಪದಾದಿಗಳಿಂದ ಬಹುದೂರ ಹಿಂಬಾಲಿಸಲ್ಪಟ್ಟ.

ಆನಂತರ ಕೃಷ್ಣ ಅವರೆಲ್ಲರನ್ನು ನಿಲ್ಲಿಸಿ ಹೇಳಿ ಹಿಂದೆ ಕಳಿಸಿದ,

ಶ್ರೇಷ್ಠ ಬ್ರಾಹ್ಮಣರ ಸೇರಿಕೊಂಡು ಕೌರವರ ಬಳಿಗೆ ತೆರಳಿದ.

 

ಏಕೋsಪಿ ವಿಷ್ಣುಃ ಸ ತು ಭಾರ್ಗ್ಗವಾತ್ಮಾ ವ್ಯಾಸಃ ಸಶಿಷ್ಯಸ್ತದನನ್ಯದೃಶ್ಯಃ ।

ಯಯೌ ತದುಕ್ತೇರ್ಹಿ ಗುಣಾನ್ ಪ್ರವೇತ್ತುಂ ನಾನ್ಯೋ ಹಿ ಶಕ್ತಸ್ತಮೃತೇ ಯತಃ ಪ್ರಭುಮ್ ॥೨೪.೬೨॥

 

ಪರಶುರಾಮರೂಪಿ ಹಾಗೂ ವೇದವ್ಯಾಸರೂಪಿ ಆದ ಆ ಶ್ರೀಕೃಷ್ಣ ಒಬ್ಬನೇ,

ಆದರೂ ಪರಶುರಾಮ ವೇದವ್ಯಾಸರನ್ನು ಹಿಂಬಾಲಿಸಿ ಹೊರಟ ಶ್ರೀಕೃಷ್ಣ ತಾನೇ.

ಕೃಷ್ಣನಭಿಪ್ರಾಯ ಸಂಪೂರ್ಣವಾಗಿ ಅರಿಯಲು ಅವನೊಬ್ಬನೇ ಸಮರ್ಥ,

ಅವನನ್ನು ಬಿಟ್ಟು ಇನ್ಯಾರಿಗೂ ಆ ಸಾಮರ್ಥ್ಯವು ಇಲ್ಲವೆಂಬುದೇ ಇತ್ಯರ್ಥ.

 

 

ಸ ವನ್ದ್ಯಮಾನೋsಖಿಲರಾಷ್ಟ್ರವಾಸಿಭಿಃ ಪ್ರಸೂನವರ್ಷೈರಭಿವರ್ಷಿತಃ ಸುರೈಃ ।

ಸಂಸ್ತೂಯಮಾನಃ ಪ್ರಣತೋsಬ್ಜಜಾದಿಭಿರ್ಗ್ಗಜಾಹ್ವಯಂ ಪ್ರಾಪ ಪರೋSಪ್ರಮೇಯಃ ॥೨೪.೬೩॥

 

ಶ್ರೀಕೃಷ್ಣ ಎಲ್ಲಾ ರಾಷ್ಟ್ರವಾಸಿಗಳಿಂದ ನಮಿಸಲ್ಪಟ್ಟ,

ಸರ್ವದೇವತೆಗಳಿಂದ ಆದ ಪುಷ್ಪವೃಷ್ಟಿಗೊಳಪಟ್ಟ.

ಬ್ರಹ್ಮ ಮೊದಲಾದ ದೇವತೆಗಳು ಮಾಡುತ್ತಿರಲು ಸ್ತೋತ್ರ,

ಎಲ್ಲರಿಂದ ನಮಸ್ಕರಿಸಿಕೊಳ್ಳುತ್ತಾ ಸೇರಿದ ಹಸ್ತಿನಪುರ.

 

ಸ ಭೀಷ್ಮಮುಖ್ಯೈಃ ಸರಸಾಭಿಯಾತಃ ಸಹೈವ ತೈಃ ಪ್ರಯಯೌ ರಾಜಮಾರ್ಗ್ಗೇ ।

ದಿದೃಕ್ಷವಸ್ತಂ ಜಗದೇಕಸುನ್ದರಂ ಗುಣಾರ್ಣ್ಣವಂ ಪ್ರಾಯಯುರತ್ರ ಸರ್ವೇ ॥೨೪.೬೪॥

 

ಭೀಷ್ಮಾದಿಗಳಿಂದ ಸ್ನೇಹಪೂರ್ವಕವಾಗಿ ಎದುರುಗೊಂಡ ಭಗವಂತ,

ಅವರೆಲ್ಲರನ್ನೂ ಕೂಡಿಕೊಂಡು ಪ್ರವೇಶಿಸಿದ ಶ್ರೀಕೃಷ್ಣ ರಾಜಪಥ.

ಶ್ರೀಕೃಷ್ಣ ಅತ್ಯಂತ ಸುಂದರ ಗುಣಗಳ ಸಾಗರ,

ಅವನ ಕಾಣಬಯಸಿ ಬಂದಿತ್ತಲ್ಲಿಗೆ ಜನಸಾಗರ.

 

ಸಭಾಜಿತಸ್ತೈಃ ಪರಮಾದರೇಣ ವಿವೇಶ ಗೇಹಂ ನೃಪತೇರನನ್ತಃ ।

ಸ ಭೀಷ್ಮಮುಖ್ಯಾನ್ ಪುರತೋ ನಿಧಾಯ ವೈಚಿತ್ರವೀರ್ಯ್ಯೇಣ ಸಮರ್ಚ್ಚಿತೋSಜಃ ।

ರೌಗ್ಮೇ ನಿಷಣ್ಣಃ ಪರಮಾಸನೇ ಪ್ರಭುರ್ಬಭೌ ಸ್ವಭಾಸಾ ಕಕುಭೋSವಭಾಸಯನ್ ॥೨೪.೬೫॥

 

ಭೀಷ್ಮಾದಿಗಳಿಂದ ಕೃಷ್ಣನಿಗೆ ಸಂದಿತು ಗೌರವ- ಆದರ,

ಶ್ರೀಕೃಷ್ಣ ಪ್ರವೇಶಿಸಿದ ಧೃತರಾಷ್ಟ್ರನ ಅರಮನೆಯ ದ್ವಾರ.

ಭೀಷ್ಮಾದಿಗಳನ್ನೊಳಗೊಂಡ ಧೃತರಾಷ್ಟ್ರನಿಂದಾದ ಶ್ರೀಕೃಷ್ಣ ಪೂಜಿತ,

ತನ್ನ ಕಾಂತಿಯಿಂದ ದಿಕ್ಕುಗಳ ಬೆಳಗುತ್ತ ಕೃಷ್ಣ ಸುವರ್ಣಾಸನದಿ ಕುಳಿತ.

 

ಯಥೋಚಿತಂ ತೇಷು ವಿಧಾಯ ಕೇಶವೋ ದೌರ್ಯ್ಯೋಧನಂ ಪ್ರಾಪ್ಯ ಗೃಹಂ ಚ ಪೂಜಿತಃ  ।

ಪೂಜಾಂ ತದೀಯಾಂ ಗುಣವದ್ ದ್ವಿಡಿತ್ಯಸೌ ಜಗ್ರಾಹ ನೋ ವಿದುರಂ ಚಾsಜಗಾಮ ॥೨೪.೬೬॥

 

ಭೀಷ್ಮಾದಿಗಳಿಂದಲೂ ಶ್ರೀಕೃಷ್ಣ ಮಾಡಿದ ಯೋಗ್ಯ ಪೂಜೆಯ ಸ್ವೀಕಾರ,

ದುರ್ಯೋಧನನ ಮನೆಗ್ಹೋದರೂ ತಿರಸ್ಕರಿಸಿದ ಗುಣದ್ವೇಷಿಯ ಸತ್ಕಾರ.

ಆನಂತರ ಶ್ರೀಕೃಷ್ಣ ಪ್ರವೇಶ ಮಾಡಿದ್ದು ತನ್ನ ಭಕ್ತ ವಿದುರನ ಮನೆಯ ದ್ವಾರ.

 

ಸ ಭೀಷ್ಮಪೂರ್ವೈರಭಿಯಾಚಿತೋSಪಿ ಜಗಾಮ ನೈಷಾಂ ಗೃಹಮಾದಿದೇವಃ ।

ಉಪೇಕ್ಷಿತಾ ದ್ರೌಪದೀತ್ಯಪ್ರಮೇಯೋ ಜಗಾಮ ಗೇಹಂ ವಿದುರಸ್ಯ ಶೀಘ್ರಮ್ ॥೨೪.೬೭॥

 

ಹಿಂದೆ ನಡೆದಾಗ ದ್ರೌಪದೀ ದೇವಿಯ ವಸ್ತ್ರಾಪಹರಣ,

ಭೀಷ್ಮಾಚಾರ್ಯರು ಅದನ್ನ ಆಗ ಉಪೇಕ್ಷಿಸಿದ ಕಾರಣ,

ಭೀಷ್ಮ ಮೊದಲಾದವರು ಬೇಡಿಕೊಂಡಾಗಲೂ ಕೂಡಾ,

ಶ್ರೀಕೃಷ್ಣ ತುಳಿಯಲಿಲ್ಲ ಅವರ್ಯಾರ ಮನೆಗಳ ಜಾಡ.

ಶೀಘ್ರವಾಗಿ ವಿದುರನ ಮನೆಯ ಕಡೆಗೆ ತಾನು ತೆರಳಿದ.

 

 ಸ ತೇನ ಭಕ್ತ್ಯಾSಭಿಗತಃ ಪ್ರಸನ್ನಃ ಪ್ರವಿಶ್ಯ ಚಾನ್ತರ್ಗ್ಗೃಹಮೀಶ್ವರೋSಜಃ ।

ಭಕ್ತ್ಯಾSಭಿಪೂರ್ಣ್ಣೇನ ಸಸಮ್ಭ್ರಮೇಣ ಸಮ್ಪೂಜಿತಃ ಸರ್ವಸಮರ್ಪ್ಪಣೇನ ॥೨೪.೬೮॥

 

ವಿದುರನಿಂದ ಭಕ್ತಿ ಗೌರವಗಳಿಂದ ಎದಿರುಗೊಳ್ಳಲ್ಪಟ್ಟ,

ಪ್ರಸನ್ನನ್ನಾಗಿ ಅನುಗ್ರಹಿಸುತ್ತಾ ಅವನ ಮನೆಯೊಳಗೆ ಕಾಲಿಟ್ಟ.

ದಾಸ ವಿದುರನದು ಉತ್ಕೃಷ್ಟ ಭಕ್ತಿಯ ಸಂಭ್ರಮಾಚರಣೆ,

ಕೃಷ್ಣನ ಸತ್ಕರಿಸಿ ಮಾಡಿದ ತನ್ನಲ್ಲಿದ್ದೆಲ್ಲದರ ಸಮರ್ಪಣೆ.

 

ಪರೇ ದಿನೇSಸೌ ಧೃತರಾಷ್ಟ್ರಸೂನುನಾ ಸಮಾನೀತಃ ಸಂಸದಿ ಕೌರವಾಣಾಮ್ ।

ವಿವೇಶ ದಿವ್ಯೇ ಮಣಿಕಾಞ್ಚನಾಸನೇ ಸಾರ್ದ್ಧಂ ಮುನೀನ್ದ್ರೈಃ ಪರಮಾರ್ತ್ಥವೇದಿಭಿಃ ॥೨೪.೬೯॥

 

ಮಾರನೇ ದಿನ ದುರ್ಯೋಧನ ತಾನೇ ಕೃಷ್ಣನ ಕರೆಯಲು ಬಂದ,

ಹಿಂಬಾಲಿಸಿದ ಶ್ರೀಕೃಷ್ಣ ಕೌರವರ ಸಭೆಯನ್ನು ಪ್ರವೇಶ ಮಾಡಿದ,

ಮುತ್ತು ಸುವರ್ಣಾಸನದಲಿ ಮುನಿಗಳ ಜೊತೆ ಕುಳಿತ ಮುಕುಂದ. 

No comments:

Post a Comment

ಗೋ-ಕುಲ Go-Kula