Wednesday 22 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 112-128

 

ಶಿನಿಪ್ರವೀರೇ ತು ಗತೇ ಯುಧಿಷ್ಠಿರಃ ಪುನಶ್ಚ ಚಿನ್ತಾಕುಲಿತೋ ಬಭೂವ ಹ ।

ಜಗಾದ ಭೀಮಂ ಚ ನ ಗಾಣ್ಡಿವಧ್ವನಿಃ ಸಂ ಶ್ರೂಯತೇ ಪಾಞ್ಚಜನ್ಯಸ್ಯ ರಾವಃ ॥ ೨೬.೧೧೨ ॥

 

ಅತ್ತ ಸಾತ್ಯಕಿ ತೆರಳಿದ ಮೇಲೆ ಯುಧಿಷ್ಠಿರನು ಮತ್ತೆ ಚಿಂತಾಕ್ರಾಂತನಾದ,

ಗಾಂಡೀವದ ಧ್ವನಿ ಕೇಳುತ್ತಿಲ್ಲ, ಕೇವಲ ಪಾಂಚಜನ್ಯದ ಧ್ವನಿ ಕೇಳಿಸುತ್ತಿದೆ ಭೀಮ ಎಂದ.

 

ಮಯಾ ನಿಯುಕ್ತಶ್ಚ ಗತಃ ಸ ಸಾತ್ಯಕಿರ್ಭಾರಂ ಚ ತಸ್ಯಾಧಿಕಮೇವ ಮನ್ಯೇ ।

ತತ್ ಪಾಹಿ ಪಾರ್ತ್ಥಂ ಯುಯುಧಾನಮೇವ ಚ ತ್ವಂ ಭೀಮ ಗತ್ವಾ ಯದಿ ಜೀವತಸ್ತೌ ॥ ೨೬.೧೧೩ ॥

 

‘ನನ್ನಿಂದ ನಿಯೋಜಿಸಲ್ಪಟ್ಟ ಸಾತ್ಯಕಿಯು ಇಲ್ಲಿಂದ ಹೋಗಿದ್ದಾನೆ,

ಅವನಿಗೆ ಹೆಚ್ಚಿನ ಭಾರ ಹಾಕಿದೆನೋ ಏನೋ ಎಂದು ನನ್ನ ಭಾವನೆ.

ಆದ ಕಾರಣ ಭೀಮ ನೀನು ಹೋಗಿ ನೋಡು, ಅರ್ಜುನ-ಸಾತ್ಯಕಿ ಬದುಕಿದ್ದರೆ ಅವರ ಕಾಪಾಡು.

 

ಇತೀರಿತಃ ಪ್ರಾಹ ವೃಕೋದರಸ್ತಂ ನ ರಕ್ಷಿತಂ ವಾಸುದೇವೇನ ಪಾರ್ತ್ಥಮ್ ।

ಬ್ರಹ್ಮೇಶಾನಾವಪಿ ಜೇತುಂ ಸಮರ್ತ್ಥೌ ಕಿಂ ದ್ರೌಣಿಕರ್ಣ್ಣಾದಿಧನುರ್ಭೃತೋSತ್ರ ॥ ೨೬.೧೧೪ ॥

 

ಈರೀತಿಯಾಗಿ ಯುಧಿಷ್ಠಿರ ಹೇಳಲು ಭೀಮನೆಂದ,

ಅರ್ಜುನ ರಕ್ಷಿತನಾಗಿದ್ದಾನೆ ಆ ವಾಸುದೇವನಿಂದ.

ಬ್ರಹ್ಮ-ರುದ್ರಾದಿಗಳೂ ಕೂಡಾ ಅವನ ಗೆಲ್ಲಲು ಸಮರ್ಥರಲ್ಲ.

ಇನ್ನು ಅಶ್ವತ್ಥಾಮ, ಕರ್ಣಾದಿಗಳಿಂದ ಭಯವಿಲ್ಲ ಎಂದ್ಹೇಳಬೇಕಿಲ್ಲ.

 

ಅತೋ ಭಯಂ ನಾಸ್ತಿ ಧನಞ್ಚಯಸ್ಯ ನ ಸಾತ್ಯಕೇಶ್ಚೈವ ಹರೇಃ ಪ್ರಸಾದಾತ್ ।

ರಕ್ಷ್ಯಸ್ತ್ವಮೇವಾತ್ರ ಮತೋ ಮಮಾದ್ಯ ದ್ರೋಣೋ ಹ್ಯಯಂ ಯತತೇ ತ್ವಾಂ ಗೃಹೀತುಮ್ ॥ ೨೬.೧೧೫ ॥

 

ದೈವಾನುಗ್ರಹದಿಂದ ಅರ್ಜುನನಿಗಾಗಲೀ, ಸಾತ್ಯಕಿಗಾಗಲೀ ಭಯವಿಲ್ಲ,

ಆದರೆ ಇಲ್ಲಿ  ದ್ರೋಣ ಹಾಕಿದ್ದಾನೆ ನಿನ್ನನ್ನು ಹಿಡಿಯಬೇಕೆನ್ನುವ ಜಾಲ.

ಹೀಗಾಗಿಯೇ ಈಗ ನಾನು ಇಲ್ಲಿದ್ದು ನಿನ್ನನ್ನು ರಕ್ಷಣೆ ಮಾಡುವ ಕಾಲ.

 

ಇತೀರಿತಃ ಪ್ರಾಹ ಯುಧಿಷ್ಠಿರಸ್ತಂ ನ ಜೀವಮಾನೇ ಯುಧಿ ಮಾಂ ಘಟೋತ್ಕಚೇ ।

ಧೃಷ್ಟದ್ಯುಮ್ನೇ ಚಾಸ್ತ್ರವಿದಾಂ ವರಿಷ್ಠೇ ದ್ರೋಣೋ ವಶಂ ನೇತುಮಿಹ ಪ್ರಭುಃ ಕ್ವಚಿತ್ ॥ ೨೬.೧೧೬ ॥

 

ಭೀಮಸೇನನನ್ನು ಕುರಿತು ಹೇಳುತ್ತಾನೆ-ಇದನ್ನೆಲ್ಲಾ ಕೇಳಿಸಿಕೊಂಡ ಯುಧಿಷ್ಠಿರ,

ಘಟೋತ್ಕಚ, ಅಸ್ತ್ರಶ್ರೇಷ್ಠ ಧೃಷ್ಟದ್ಯುಮ್ನರಿದ್ದಾಗ ದ್ರೋಣ ನನ್ನನ್ನು ಹಿಡಿಯಲಾರ.

 

ಯದಿ ಪ್ರಿಯಂ ಕರ್ತ್ತುಮಿಹೇಚ್ಛಸಿ ತ್ವಂ ಮಮ ಪ್ರಯಾಹ್ಯಾಶು ಚ ಪಾರ್ತ್ಥಸಾತ್ಯಕೀ ।

ರಕ್ಷಸ್ವ ಸಙ್ಜ್ಞಾಮಪಿ ಸಿಂಹನಾದಾತ್ ಕುರುಷ್ವ ಮೇ ಪಾರ್ತ್ಥಶೈನೇಯದೃಷ್ಟೌ ॥ ೨೬.೧೧೭ ॥

 

ನನಗೆ ಇಷ್ಟ ಪೂರೈಸಬೇಕೆಂದಿದ್ದರೆ ನಿನ್ನ ಯೋಚನೆ,

ಶೀಘ್ರದಲ್ಲಿ ಮಾಡು ಅರ್ಜುನ-ಸಾತ್ಯಕಿಯರ ರಕ್ಷಣೆ,

ನೀಡು ಅವರನ್ನು ಕಂಡ ಮೇಲೆ ಸಿಂಹನಾದದ ಸೂಚನೆ.

 

ತಥಾ ಹತೇ ಚೈವ ಜಯದ್ರಥೇ ಮೇ ಕುರುಷ್ವ ಸಙ್ಜ್ಞಾಮಿತಿ ತೇನ ಭೀಮಃ ।

ಉಕ್ತಸ್ತು ಹೈಡಿಮ್ಬಮಮುಷ್ಯ ರಕ್ಷಣೇ ವ್ಯಧಾಚ್ಚ ಸೇನಾಪತಿಮೇವ ಸಮ್ಯಕ್ ॥ ೨೬.೧೧೮ ॥

 

ಹಾಗೆಯೇ ಜಯದ್ರಥ ಹತನಾದಾಗಲೂ ನನಗೆ ಸೂಚನೆಯನ್ನು ಮಾಡು ಎಂದು ಹೇಳಿದ.

ಆಗ ಭೀಮ ಯುಧಿಷ್ಠಿರನ ರಕ್ಷಣೆಗಾಗಿ ಘಟೋತ್ಕಚ - ಧೃಷ್ಟದ್ಯುಮ್ನರ ನೇಮಿಸಿದ.

 

ಸ ಚಾSಹ ಸೇನಾಪತಿರತ್ರ ಭೀಮಂ ಪ್ರಯಾಹಿ ತೌ ಯತ್ರ ಚ ಕೇಶವಾರ್ಜ್ಜುನೌ ।

ನ ಜೀವಮಾನೇ ಮಯಿ ಧರ್ಷಿತುಂ ಕ್ಷಮೋ ದ್ರೋಣೋ ನೃಪಂ ಮೃತ್ಯುರಹಂ ಚ ತಸ್ಯ ॥ ೨೬.೧೧೯ ॥

 

ಆಗ ಸೇನಾಧಿಪತಿಯಾದ ಧೃಷ್ಟದ್ಯುಮ್ನ ಭೀಮಗೆ, ಹೋಗಲು ಹೇಳುವ ಕೃಷ್ಣಾರ್ಜುನರಿರುವಲ್ಲಿಗೆ. ನಾನು ಬದುಕಿರಬೇಕಾದರೆ ಆ ದ್ರೋಣ, ಅವನಿಗಿಲ್ಲ ಧರ್ಮಜನ ಹಿಡಿಯುವ ತ್ರಾಣ,

ನಾನೇ ಆಗಿದ್ದೇನೆ ದ್ರೋಣನ ಪಾಲಿನ ಮರಣ.

 

ಇತಿ ಬ್ರುವಾಣೇ ಪ್ರಣಿಧಾಯ ಭೀಮಃ ಪುನಃ ಪುನಸ್ತಂ ನೃಪತಿಂ ಗದಾಧರಃ ।

ಯಯೌ ಪರಾನೀಕಮಧಿಜ್ಯಧನ್ವಾ ನಿರನ್ತರಂ ಪ್ರವಪನ್ ಬಾಣಪೂಗಾನ್ ॥ ೨೬.೧೨೦ ॥

 

ಈರೀತಿಯಾಗಿ ಅವರಿಂದ ಪುನಃ ಹೇಳಲ್ಪಟ್ಟ ಭೀಮಸೇನ,

ಧರ್ಮರಾಜನ ರಕ್ಷಣೆಗೆ ಸ್ಥಾಪಿಸುತ್ತಾನೆ ಧೃಷ್ಟದ್ಯುಮ್ನನನ್ನ.

ಗದೆ ಹಿಡಿದು, ಬಿಲ್ಲಿನಿಂದ ಶತ್ರುಸೈನ್ಯದ ಮೇಲೆ,

ಸುರಿಸುತ್ತ ಸಾಗಿದ ಬಾಣಗಳ ನಿರಂತರ ಮಳೆ.

 

ನ್ಯವಾರಯತ್ ತಂ ಶರವರ್ಷಧಾರೋ ದ್ರೋಣೋ ವಚಶ್ಚೇದಮುವಾಚ ಭೀಮಮ್ ।

ಶಿಷ್ಯಸ್ನೇಹಾದ್ ವಾಸವಿಃ ಸಾತ್ಯಕಿಶ್ಚ ಮಯಾ ಪ್ರಮುಕ್ತೌ ಭೃಶಮಾನತೌ ಮಯಿ ॥ ೨೬.೧೨೧ ॥

 

ಹೀಗೆ ಮುನ್ನುಗ್ಗುತ್ತಿದ್ದ ಭೀಮಸೇನನಿಗೆ ಬಾಣಗಳ ಮಳೆಗರೆಯುತ್ತಿರುವ ದ್ರೋಣಾಚಾರ್ಯ,

ತಡೆದು ಹೇಳಿದ-ಅರ್ಜುನ ಸಾತ್ಯಕಿಯರನ್ನು ಬಿಟ್ಟು ಉಳಿಸಿದೆ ‘ಶಿಷ್ಯ ಪ್ರೀತಿಯ ಔದಾರ್ಯ'.

 

ಸ್ವೀಯಾ ಪ್ರತಿಜ್ಞಾSಪಿ ಹಿ ಸೈನ್ಧವಸ್ಯ ಗುಪ್ತೌ ಮಯಾ ಪಾರ್ತ್ಥಕೃತೇ ವಿಸೃಷ್ಟಾ

ದಾಸ್ಯೇ ನ ತೇ ಮಾರ್ಗ್ಗಮಹಂ ಕಥಞ್ಚಿದ್ ಪಶ್ಯಾಸ್ತ್ರವೀರ್ಯಂ ಮಮ ದಿವ್ಯಮದ್ಭುತಮ್ ॥ ೨೬.೧೨೨ ॥

 

ಜಯದ್ರಥನ ರಕ್ಷಣೆಗಾಗಿ ನಾನು ಮಾಡಿದ ಪ್ರತಿಜ್ಞೆ, ಅದನ್ನು ಕೂಡಾ ಅರ್ಜುನನಿಗೋಸ್ಕರ ಬಿಟ್ಟಿದ್ದೇನೆ. ಆದರೆ ನಿನಗೆ ಮಾತ್ರ ಯಾವುದೇ ಕಾರಣಕ್ಕೂ ನಾನು ದಾರಿ ಕೊಡುವುದಿಲ್ಲ,

ನೋಡು ನನ್ನ ಅಲೌಕಿಕವಾದ ಅದ್ಭುತವಾದ ಅಸ್ತ್ರ ಸಾಮರ್ಥ್ಯದ ಬಲ.

 

ಇತ್ಯುಕ್ತವಾಕ್ಯಃ  ಸ ಗದಾಂ ಸಮಾದದೇ ಚಿಕ್ಷೇಪ ತಾಂ ದ್ರೋಣರಥಾಯ ಭೀಮಃ ।

ಉವಾಚ ಚಾಹಂ ಪಿತೃವನ್ಮಾನಯೇ ತ್ವಾಂ ಸದಾ ಮೃದುಸ್ತ್ವಾಂ ಪ್ರತಿ ನಾನ್ಯಥಾ ಕ್ವಚಿತ್ ॥ ೨೬.೧೨೩ ॥

 

ಈರೀತಿ ದ್ರೋಣರು ಹೇಳಲು ಭೀಮ ತನ್ನ ಗದೆಯನ್ನು ದ್ರೋಣರಥದತ್ತ ಎಸೆದ,

ನೀನು ನನ್ನ ತಂದೆ ಸಮಾನ ಗೌರವಪಾತ್ರ ಹಾಗಾಗಿಯೇ ನನ್ನ ಮೃದುತ್ವ ಎಂದ.

ಪ್ರೀತಿ ಗೌರವ ಮೃದುತ್ವದ ಹೂರಣ, ಅದನ್ನ ಬಿಟ್ಟು ಮತ್ತೇನಿಲ್ಲ ಕಾರಣ.

 

ಅಮಾರ್ದ್ದವೇ ಪಶ್ಯ ಚ ಯಾದೃಶಂ ಬಲಂ ಮಮೇತಿ ತಸ್ಯಾSಶು ವಿಚೂರ್ಣ್ಣಿತೋ ರಥಃ ।

ಗದಾಭಿಪಾತೇನ ವೃಕೋದರಸ್ಯ ಸಸೂತವಾಜಿಧ್ವಜಯನ್ತ್ರಕೂಬರಃ ॥ ೨೬.೧೨೪ ॥

 

‘ನಾನು ಸಿಡಿದರೆ ನನ್ನ ಬಲ ಯಾವ ರೀತಿ ಇರುತ್ತದೆ ಎನ್ನುವುದನ್ನು ನೀನು  ನೋಡು’  ಎಂದ ಭೀಮ ತನ್ನ ಗದೆಯನ್ನು ಎಸೆದ,

ಸೂತ, ಕುದುರೆ, ಧ್ವಜ, ನೊಗ, ಎಲ್ಲದರೊಂದಿಗೆ ದ್ರೋಣಾಚಾರ್ಯರ ರಥ ಪುಡಿ-ಪುಡಿಯಾಯಿತು ಭೀಮಗದಾಪ್ರಹಾರದಿಂದ.

 

ದ್ರೋಣೋ ಗದಾಮಾಪತತೀಂ ನಿರೀಕ್ಷ್ಯ ತ್ವವಪ್ಲುತೋ ಲಾಘವತೋ ಧರಾತಳೇ ।

ತದೈವ ದುರ್ಯ್ಯೋಧನಯಾಪಿತಂ ರಥಂ ಪರಂ ಸಮಾಸ್ಥಾಯ ಶರಾನ್ ವವರ್ಷ ಹ ॥ ೨೬.೧೨೫ ॥

 

ಬರುತ್ತಿದ್ದ ಗದೆಯ ನೋಡಿದ ದ್ರೋಣರು , ವೇಗವಾಗಿ ಭೂಮಿಗೆ ಹಾರಿಕೊಂಡರು.

ಕೌರವ ಕಳಿಸಿದ ಇನ್ನೊಂದು ರಥವೇರಿದರು, ಏರಿದ ಮೇಲೆ ಮತ್ತೆ ಬಾಣಗಳ ಮಳೆಗೈದರು.

 

ಶರೈಸ್ತದೀಯೈಃ ಪರಮಾಸ್ತ್ರಮನ್ತ್ರಿತೈಃ ಪ್ರವೃಷ್ಯಮಾಣೋ ಜಗದೀರಣಾತ್ಮಜಃ ।

ಶಿರೋ ನಿಧಾಯಾSಶು ಪುರೋ ವೃಷೋ ಯಥಾ ತಮಭ್ಯಯಾದೇವ ರಥಾದವಪ್ಲುತಃ ॥ ೨೬.೧೨೬ ॥

 

ಅತ್ಯಂತ ಮಂತ್ರಪೂತವಾಗಿರುವ ಆ ಬಾಣಗಳ ಎದುರುಗೊಂಡ,

ಮುಖ್ಯಪ್ರಾಣಪುತ್ರ ಭೀಮ, ಗೂಳಿಯಂತೆ ತಲೆ ಮುಂದೆ ಮಾಡಿಕೊಂಡ.

ರಥದಿಂದಿಳಿದವನೇ ಗೂಳಿಯಂತೆ ದ್ರೋಣರತ್ತ ವೇಗವಾಗಿ ನುಗ್ಗಿಬಂದ.

 

ಯಾವರೀತಿ ಮುನ್ನುಗ್ಗುತ್ತಿರುವ ಗೂಳಿ,

ಜೋರಾಗಿ ಸುರಿವ ಮಳೆಯನ್ನು ತಾಳಿ, ತಡೆದುಕೊಳ್ಳುವಂತೆ ವಾಯುಪುತ್ರ;

ತನ್ನ ತೋಳ ಮುಂದೆ ಮಾಡಿ, ತಲೆ ಬಗ್ಗಿಸಿ ಮುನ್ನುಗ್ಗುತ್ತಿದ್ದ ನರವ್ಯಾಘ್ರ ಭೀಮ ಮಾಡಿದ ದ್ರೋಣರ ಶರಮಳೆಯ ಸ್ವೀಕಾರ.

 

ಮನೋಜವಾದೇವ ತಮಾಪ್ಯ ಭೀಮೋ ರಥಂ ಗೃಹೀತ್ವಾSಮ್ಬರ ಅಕ್ಷಿಪತ್ ಕ್ಷಣಾತ್ ।

ಶಕ್ತೋSಪ್ಯಹಂ ತ್ವಾಂ ನ ನಿಹನ್ಮಿ ಗೌರವಾದಿತ್ಯೇವ ಸುಜ್ಞಾಪಯಿತುಂ ತದಸ್ಯ ॥ ೨೬.೧೨೭ ॥

 

‘ನನಗೆ ಶಕ್ತಿ ಇದ್ದರೂ ಕೂಡಾ ನಿಮ್ಮ ಮೇಲಿನ ಗೌರವ ಭಾವನೆಯಿಂದ ನಿಮ್ಮನ್ನು ಕೊಲ್ಲುವುದಿಲ್ಲ’ ಎಂದು ದ್ರೋಣರಿಗೆ ತನ್ನ ಬಲವ ತೋರುವುದಕ್ಕೆ; ಭೀಮಸೇನನು ಮನಸ್ಸಿಗೆ ಮೀರಿದ ವೇಗದಿಂದ ದ್ರೋಣಾಚಾರ್ಯರ ಬಳಿಗೆ ಸಾಗಿ ಬಂದವನು ಅವರ ರಥವನ್ನು ಹಿಡಿದು ಎಸೆದ ಆಕಾಶಕ್ಕೆ. 

 

ಸವಾಜಿಸೂತಃ ಸ ರಥಃ ಕ್ಷಿತೌ ಪತನ್ ವಿಚೂರ್ಣ್ಣಿತೋSಸ್ಮಾದ್ ಗುರುರಪ್ಯವಪ್ಲುತಃ ।

ತದಾ ವಿಶೋಕೋSಸ್ಯ ರಥಂ ಸಮಾನಯತ್ ತಮಾರುಹದ್ ಭೀಮ ಉದಾರವಿಕ್ರಮಃ ॥ ೨೬.೧೨೮ ॥

 

ಕುದುರೆ, ಸೂತ, ಮೊದಲಾದವರಿಂದ ಕೂಡಿದ ಆ ರಥ ನೆಲಕ್ಕೆ ಬಿದ್ದು ಪುಡಿ-ಪುಡಿಯಾದಾಗ,

ಆ ರಥದಿಂದ ಗುರುದ್ರೋಣರೂ ಕೆಳಗೆ ಹಾರಲು  ಭೀಮಸಾರಥಿ ವಿಶೋಕನು ರಥವ ತಂದಾಗ, ಉತ್ಕೃಷ್ಟವಾದಂಥ ಪರಾಕ್ರಮವುಳ್ಳವನಾದ ಭೀಮಸೇನನು ತನ್ನ ರಥವನ್ನೇರಿಕೊಳ್ಳುವನಾಗ .

 

No comments:

Post a Comment

ಗೋ-ಕುಲ Go-Kula