Wednesday 22 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 74-78

 

ಪಾರ್ತ್ಥೇ ಪ್ರವಿಷ್ಟೇ ಕುರುಸೈನ್ಯಮದ್ಧ್ಯಂ ದ್ರೋಣೋSವಿಶತ್ ಪಾಣ್ಡವಸೈನ್ಯಮಾಶು ।

ಸ ತದ್ರಥಾನೀಕಮುದಗ್ರವೇಗೈಃ ಶರೈರ್ವಿಧೂಯ ನ್ಯಹನಚ್ಚ ವೀರಾನ್ ॥೨೬.೭೪॥

 

ಅರ್ಜುನನು ಕೌರವ ಸೈನ್ಯ ನಡುವಲ್ಲಿ ಪ್ರವೇಶಮಾಡುತ್ತಿರುವಾಗ,

ಇತ್ತ ದ್ರೋಣಾಚಾರ್ಯರು ಪಾಂಡವರ ಸೇನೆಯನ್ನು ಹೊಕ್ಕರಾಗ .

ಅವರು ಪಾಂಡವ ರಥಿಕರ ಸಮೂಹದ ಮೇಲೆ ಉಗ್ರ ವೇಗ ಬಾಣಗಳನ್ನು ಬಿಡುತ್ತಾರೆ,

ಅವರನ್ನು ಹೊಡೆದು ಓಡಿಸುತ್ತಾ ಬಹಳ ಜನ ಪರಾಕ್ರಮಶಾಲಿಗಳನ್ನು ಕೊಲ್ಲುತ್ತಾರೆ.

 

ಸ ವೀರವರ್ಯ್ಯಃ ಸ್ಥವಿರೋSಪಿ ಯೂನಾಂ ಯುವೇವ ಮದ್ಧ್ಯೇ ಪ್ರಚಚಾರ ಧನ್ವಿನಾಮ್ ।

ಪ್ರಪಾತಯನ್ ವೀರಶಿರಾಂಸಿ ಬಾಣೈರ್ಯ್ಯುಧಿಷ್ಠಿರಂ ಚಾSಸದದುಗ್ರವೀರ್ಯ್ಯಃ ॥೨೬.೭೫॥

 

ವೀರರಲ್ಲಿಯೇ ಹಿರಿಯರಾದ ದ್ರೋಣಾಚಾರ್ಯ ಆಗಿದ್ದಾಗಲೂ ವೃದ್ಧ,

ಯುವಕರ ಮಧ್ಯದಲ್ಲಿ ನವ ಯುವಕನಂತೆಯೇ ಮಾಡುತ್ತಾರೆ ಯುದ್ಧ.

ಬಾಣಗಳಿಂದ ವೀರರ ತಲೆಗಳನ್ನು ಉರುಳಿಸುತ್ತಾ, ಮಹಾಪರಾಕ್ರಮದಿ ಸಾಗಿದರು ಯುಧಿಷ್ಠಿರನತ್ತ.

 

ನೃಪಗ್ರಹೇಚ್ಛುಂ ತಮವೇತ್ಯ ಸತ್ಯಜಿನ್ನ್ಯವಾರಯದ್ ದ್ರೌಪದಿರಾಶು ವೀರ್ಯ್ಯವಾನ್ ।

ನಿವಾರಿತಸ್ತೇನ ಶಿರಃ ಶರೇಣ ಚಕರ್ತ್ತ ಪಾಞ್ಚಾಲಸುತಸ್ಯ ವಿಪ್ರಃ ॥ ೨೬.೭೬ ॥

 

ಯುಧಿಷ್ಠಿರನ ಹಿಡಿಯಬೇಕೆಂಬ ದ್ರೋಣಾಚಾರ್ಯರ ಆಂತರ್ಯ,

ತಿಳಿದ ದ್ರುಪದಪುತ್ರ ಸತ್ಯಜಿತ್ ಅವರನ್ನು ತಡೆಯುತ್ತಾನೆ  ಶೀಘ್ರ.

ಅವನಿಂದ ತಡೆಹಿಡಿಯಲ್ಪಟ್ಟ ದ್ರೋಣರು,     ಬಾಣದಿಂದ ಸತ್ಯಜಿತನ ತಲೆ ಕತ್ತರಿಸಿದರು.

 

ನಿಹತ್ಯ ತಂ ವೀರತಮಂ ರಣೋತ್ಕಟಂ ಯುಧಿಷ್ಠಿರಂ ಬಾಣಗಣೈಃ ಸಮಾರ್ದ್ದಯತ್ ।

ಸ ಶಕ್ತಿತಸ್ತೇನ ವಿಧಾಯ ಸಙ್ಗರಂ ನಿರಾಯುಧೋ ವ್ಯಶ್ವರಥಃ ಕೃತಃ ಕ್ಷಣಾತ್ ॥ ೨೬.೭೭ ॥

 

ವೀರಾಗ್ರೇಸರರಾದಂಥ ದ್ರೋಣಾಚಾರ್ಯ, ಮಾಡುತ್ತಾರೆ ರಣೋತ್ಕಟ ಸತ್ಯಜಿತನ ಸಂಹಾರ. ಕೊಡುತ್ತಾರೆ ಯುಧಿಷ್ಠಿರನಿಗೆ ತೀವ್ರಬಾಣಗಳ ಸಮೂಹದಿಂದ ಪೀಡನೆ,

ಯುಧಿಷ್ಠಿರನಾದರೋ ಶಕ್ತಿ ಇದ್ದಷ್ಟು ಯುದ್ಧ ಮಾಡಿದ ದ್ರೋಣರೊಡನೆ.

ಅವನು ದ್ರೋಣರಿಂದ ಒಂದು ಕ್ಷಣದಲ್ಲಿ ನಿರಾಯುಧನಾದ,

ಕುದುರೆ-ರಥಗಳ ಕಳೆದುಕೊಂಡವನಾಗಿ ಅಸಹಾಯಕನಾದ.

 

ಸ ಊರ್ಧ್ವಬಾಹುರ್ಭುವಿ ಸಂಸ್ಥಿತೋSಪಿ ಗೃಹೀತುಮಾಜೌ ಗುರೂಣಾSಭಿಪನ್ನಃ ।

ಮಾದ್ರೀಸುತಸ್ಯಾವರಜಸ್ಯ ಯಾನಮಾರುಹ್ಯ ವೇಗಾದಪಜಗ್ಮಿವಾಂಸ್ತತಃ ॥ ೨೬.೭೮ ॥

 

ಆಗ ಧರ್ಮರಾಜನು ಕೈಗಳನ್ನು ಮೇಲೆತ್ತಿ ನೆಲದ ಮೇಲೆ ನಿಂತ,

ಆದರೂ ಸೆರೆ ಹಿಡಿಯಲು ದ್ರೋಣರು ಬರುತ್ತಾರೆ ಧರ್ಮಜನತ್ತ.

ದ್ರೋಣಾಚಾರ್ಯರು ತನ್ನತ್ತ ಬರುವುದ ನೋಡಿ ಏನೂ ತೋಚದಾದ,

ಮಾದ್ರೀಸುತ ಸಹದೇವನ ರಥವನ್ನೇರಿ ಅಲ್ಲಿಂದ ಹೊರಟು ಹೋದ.

No comments:

Post a Comment

ಗೋ-ಕುಲ Go-Kula