Thursday 5 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 292-303

 

ಇತೀರಿತಃ ಪಾಪತಮ ಆಹ ಗಾನ್ಧಾರಕೋ ನೃಪಃ ।

ಪಾಪಾನಾಮಖಿಲಾನಾಂ ಚ ಪ್ರಧಾನಂ ಚಕ್ರವರ್ತ್ತಿನಮ್                        ॥೨೧.೨೯೨॥

ಈಪರಿಯಲ್ಲಿ ಸಾಗಿತ್ತು ದುರ್ಯೋಧನನ ಮಾತಿನ ರೀತಿ,

ಗಾಂಧಾರ ರಾಜ ಶಕುನಿಯದು ಪಾಪಿಷ್ಠ ಕುಟಿಲ ನೀತಿ.

ಶಕುನಿ ನುಡಿಗೆ ಕಿವಿಯಾದ -ಪರಮಪಾಪಿಗಳ ಚಕ್ರವರ್ತಿ.

 

ಯಾನ್ತಾಂ ಶ್ರಿಯಂ ಪ್ರದೀಪ್ತಾಂ ತ್ವಂ ಪಾಣ್ಡವೇಷು ಪ್ರಪಶ್ಯಸಿ ।

ತಾಮಕ್ಲೇಶತ ಆದಾಸ್ಯೇ ಕ್ರೀಡನ್ನ ಕ್ಷೈಸ್ತ್ವದನ್ತಿಕೇ                       ॥೨೧.೨೯೩॥

ನೀನು ನೋಡಿರುವ ಪಾಂಡವರ ಕಣ್ಣುಕುಕ್ಕುವ ಸಂಪತ್ತು,

ನಿನ್ನದಾಗಿಸುವ ಅನಾಯಾಸ ದಾಳ ಹಾಕುವ ಕಲೆ ನಂಗೊತ್ತು.

(ದಾಳ ಉರುಳಿಸುವ ಪಗಡೆಯಾಡುತ್ತಾ,  ನಿನ್ನಲ್ಲಿಗೆ ಎಳೆದು ತರುವೆ ಸಕಲ ಸಂಪತ್ತ ).

 

ಇತೀರಿತಃ ಪ್ರಸನ್ನಧೀಃ ಸುಯೋಧನೋ ಬಭೂವ ಹ ।

ಪ್ರಜಗ್ಮತುಶ್ಚ ತಾವುಭೌ ವಿಚಿತ್ರವೀರ್ಯ್ಯಜಂ ನೃಪಮ್               ॥೨೧.೨೯೪॥

ಶಕುನಿಯ ಮಾತಿನಿಂದ ಸಂತಸ ದುರ್ಯೋಧನಗೆ,

ಅವರಿಬ್ಬರೂ ಹೊರಟರು ಧೃತರಾಷ್ಟ್ರನ ಬಳಿಗೆ.

 

ಧೃತರಾಷ್ಟ್ರಮಥೋವಾಚ ದ್ವಾಪರಾಂಶೋsತಿಪಾಪಕೃತ್ ।

ನಾಸ್ತಿಕ್ಯರೂಪಃ ಶಕುನಿರ್ವಿವರ್ಣ್ಣಂ ಹರಿಣಂ ಕೃಶಮ್                  ॥೨೧.೨೯೫॥

ದ್ವಾಪರ ನಾಮಕ ದೈತ್ಯನ ಅಂಶವಾದ,

ಬಹಳಷ್ಟು ಪಾಪ ಮಾಡಲು ಕಾರಣವಾದ,

ಪ್ರಜರಲ್ಲಿ ನಾಸ್ತಿಕ್ಯ ಬಿತ್ತುವ ಶಕುನಿ ಧೃತರಾಷ್ಟ್ರಗೆ ಹೇಳುತ್ತಾನೆ,

ದುರ್ಯೋಧನ ಬಿಳಿಚಿಕೊಂಡು ಕಪ್ಪಾಗಿ ಹೋಗಿ ಕೃಶವಾಗಿದ್ದಾನೆ.

 

ದುರ್ಯ್ಯೋಧನಂ ತು  ತಚ್ಛ್ರುತ್ವಾ ಕುತ ಇತ್ಯಾಹ ದುರ್ಮ್ಮನಾಃ ।

ಅಬ್ರೂತಾಂ ತೌ ನೃಪಾಯಾsಶು ದ್ವಾಭ್ಯಾಂ ಯನ್ಮನ್ತ್ರಿತಂ ಪಥಿ             ॥೨೧.೨೯೬॥

ದುಃಖಿತ ಧೃತರಾಷ್ಟ್ರ "ಏಕೆ ಹೀಗೆ "ಎಂದು ಕೇಳುತ್ತಾನೆ,

ಆಗ ಹೇಳುತ್ತಾರೆ ದಾರಿಯಲ್ಲಿ ತಾವಂದುಕೊಂಡ ಯೋಚನೆ.

 

ಶ್ರುತ್ವೈವ ತನ್ನೇತ್ಯವದತ್ ಸ ಭೂಪತಿರ್ವಿರೋಧಿ ಧರ್ಮ್ಮಸ್ಯ ವಿನಾಶಕಾರಣಮ್ ।

ಕುಮನ್ತ್ರಿತಂ ವೋ ನ ಮಮೈತದಿಷ್ಟಂ ಸ್ವಬಾಹುವೀರ್ಯ್ಯಾಪ್ತಮಹಾಶ್ರಿಯೋ ಹಿ ತೇ ॥೨೧.೨೯೭॥

 

ತ್ವಯಾsಪಿ ನಿರ್ಜ್ಜಿತ್ಯ ದಿಶೋ ಮಖಾಗ್ರ್ಯಾಃ ಕಾರ್ಯ್ಯಾಃ ಸ್ಪೃಧೋ ಮಾ ಗುಣವತ್ತಮೈಸ್ತೈಃ ।

ವಿಶೇಷತೋ ಭ್ರಾತೃಭಿರಗ್ರ್ಯಪೌರುಷೈರಿತ್ಯುಕ್ತ ಆಹಾsಶು ಸುಯೋಧನಸ್ತಮ್             ॥೨೧.೨೯೮॥

ಧೃತರಾಷ್ಟ್ರನಿಂದ ಇದಕ್ಕೆ ಬರುವುದಿಲ್ಲ ಒಪ್ಪಿಗೆ,

ಹೇಳುತ್ತಾನೆ-ಅಧರ್ಮಿ ನಡೆಯ ಕಡೆ ವಿನಾಶದೆಡೆಗೆ.

ನಿಮ್ಮ ದುಷ್ಟ ಆಲೋಚನೆ ನನಗೆ ಇಷ್ಟವಾಗುವುದಿಲ್ಲ,

ಪಾಂಡವರ ತೋಳ್ಬಲದ ಗಳಿಕೆಯ ಮೇಲೆ ಸ್ಪರ್ಧೆ ಸಲ್ಲ.

ನೀನೂ ದಿಕ್ಕುಗಳ ಗೆದ್ದು ಶ್ರೇಷ್ಠ ಯಜ್ಞ ಯಾಗಗಳ ಮಾಡು,

ಗುಣಶ್ರೇಷ್ಠರಿರುವ ಅವರೊಂದಿಗೆ ಸ್ಪರ್ಧಿಸುವುದ ಬಿಡು.

ನಿನ್ನ ಅಣ್ಣ ತಮ್ಮಂದಿರೊಡನೆ ಸ್ಪರ್ಧೆ ಬೇಡ ಎನ್ನುತ್ತಾನೆ,

ಇದನ್ನೆಲ್ಲಾ ಕೇಳಿಸಿಕೊಂಡ ದುರ್ಯೋಧನ ಹೇಳುತ್ತಾನೆ.

 

ಯದಿ ಶ್ರಿಯಂ ಪಾಣ್ಡವಾನಾಂ ನಾಕ್ಷೈರಾಚ್ಛೇತ್ತುಮಿಚ್ಛಸಿ ।

ಮೃತಮೇವಾದ್ಯ ಮಾಂ ವಿದ್ಧಿ ಪಾಣ್ಡವೈಸ್ತ್ವಂ ಸುಖೀ ಭವ                       ॥೨೧.೨೯೯॥

 

ಯದಿ ಮಜ್ಜೀವಿತಾರ್ತ್ಥೀ ತ್ವಮಾನಯಾsಶ್ವಿಹ ಪಾಣ್ಡವಾನ್ ।

ಸಭಾರ್ಯ್ಯಾನ್ ದೇವನಾಯೈವ ನಚಾಧರ್ಮ್ಮೋsತ್ರ ಕಶ್ಚನ                  ॥೨೧.೩೦೦॥

ಒಂದೊಮ್ಮೆ ನೀನು ಈ ಜೂಜಿಗೆ ಒಪ್ಪುವುದಿಲ್ಲವಾದರೆ,

ತಿಳಿದುಕೋ - ಖಂಡಿತ ಸಾವೇ ಆಗುತ್ತದೆ ನನಗೆ ಆಸರೆ.

ನೀನು ಅನುಭವಿಸು ಪಾಂಡವರೊಂದಿಗೆ ಸುಖದ ಧಾರೆ.

ಹಾಗೊಮ್ಮೆ ನೀನು ನನ್ನ ಬದುಕ ಬಯಸುವೆಯಾದರೆ,

ದ್ರೌಪದಿ ಸಮೇತರಾದ ಪಾಂಡವರನ್ನು ಜೂಜಿಗಾಗಿ ಕರೆ.

ಈ ಜೂಜಾಟದಲ್ಲಿಲ್ಲ ಯಾವುದೇ ಅಧರ್ಮದ ಓರೆಕೋರೆ.

 

ವೇದಾನುಜೀವಿನೋ ವಿಪ್ರಾಃ ಕ್ಷತ್ರಿಯಾಃ ಶಸ್ತ್ರಜೀವಿನಃ ।

ತ್ರುಟ್ಯತೇ ಯೇನ ಶತ್ರುಶ್ಚ ತಚ್ಛಸ್ತ್ರಂ ನೈವ ಚೇತರತ್                 ॥೨೧.೩೦೧॥

ಬ್ರಾಹ್ಮಣರಿಗೆ ಆಸರೆ ವೇದಶಾಸ್ತ್ರ,

ಕ್ಷತ್ರಿಯರಿಗೆ ಆಸರೆ ಆಯುಧ-ಶಸ್ತ್ರ.

ಶತ್ರುನಾಶಕ್ಕಾಗೇ ಶಸ್ತ್ರ;ಅಲ್ಲ ಅನ್ಯತ್ರ.

 

ಅತಃ ಸ್ವಧರ್ಮ್ಮ ಏವಾಯಂ ತವಾಪಿ ಸ್ಯಾತ್ ಫಲಂ ಮಹತ್ ।

ಇತ್ಯುಕ್ತೋ ಮಾ ಫಲಂ ಮೇsಸ್ತು ತವೈವಾಸ್ತ್ವಿತಿ ಸೋsಬ್ರವೀತ್             ॥೨೧.೩೦೨॥

ಆಗಬೇಕಿದೆ ಪಾಂಡವರೆಂಬ ಶತ್ರುಗಳ ನಾಶ,

ಬಳಸುವೆ ನಾನು ಜೂಜೆನ್ನುವ ಶಸ್ತ್ರ ಪಾಶ.

ಹಾಗಾಗಿ ಕ್ಷತ್ರಿಯರಿಗೆ ಜೂಜು ಕೂಡಾ ಸ್ವಧರ್ಮ,

ನಿನಗೂ ಆಗುತ್ತದೆ ಇದು ಫಲವೀವ ನಿಯಮ.

ಧೃತರಾಷ್ಟ್ರ ಹೇಳುವ -ನನಗಿಲ್ಲ ಫಲದ ಕಾಮ.

 

ಏವಂ ಬ್ರುವನ್ನಪಿ ನೃಪ ಆವಿಷ್ಟಃ ಕಲಿನಾ ಸ್ವಯಮ್ ।

ಪುತ್ರಸ್ನೇಹಾಚ್ಚ ವಿದುರಮಾದಿಶತ್ ಪಾಣ್ಡವಾನ್ ಪ್ರತಿ               ॥೨೧.೩೦೩॥

ಹೀಗೆ ಹೇಳುತ್ತಿದ್ದರೂ ಧೃತರಾಷ್ಟ್ರನೆಂಬ ದೊರೆ,

ಆವರಿಸಿತ್ತು ಕಲ್ಯಾವೇಶ ಪುತ್ರವ್ಯಾಮೋಹದ ಪೊರೆ.

ಪಾಂಡವರ ಬಳಿಗೆ ಹೋಗಲು ವಿದುರನಿಗಿತ್ತ ಕರೆ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula