Friday 6 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 396-405

 

ಗಾನ್ಧಾರೇಣ ಪುನಶ್ಚಾಕ್ಷಹೃದಯಜ್ಞೇನ ಧರ್ಮ್ಮಜಃ ।

ಪರಾಜಿತೋ ವನಂ ಯಾತುಮೈಚ್ಛತ್ ಸಭ್ರಾತೃಕೋ ಯದಾ             ॥೨೧.೩೯೬॥

ಮತ್ತೆ ನುರಿತ ಜೂಜುಗಾರ ಶಕುನಿಯಿಂದ ಧರ್ಮರಾಜ ಸೋತುಹೋದ,

ತನ್ನ ತಮ್ಮಂದಿರೆಲ್ಲರನ್ನೂ ಸೇರಿಕೊಂಡು ಕಾಡಿಗೆ ಹೊರಡಲು ತಯಾರಾದ.

 

ತದಾ ನನರ್ತ್ತ ಪಾಪಕೃತ್ ಸುಯೋಧನಾನುಜೋ ಹಸನ್ ।

ವದಂಶ್ಚ ಮಾರುತಾತ್ಮಜಂ ಪುನಃಪುನಶ್ಚ ಗೌರಿತಿ                      ॥೨೧.೩೯೭॥

ಆಗ ನಗುತ್ತಾ ಪಾಪಿಷ್ಠನಾದ ದುಶ್ಯಾಸನ,

' ಬಲಹೀನ ದನ ನೀನು 'ಎಂದ ಭೀಮನನ್ನ.

ಕುಣಿಯುತ್ತಾ ಹೇಳಿದ ಮತ್ತದೇ ಮಾತನ್ನ.

 

ಉವಾಚ ಚ ಪುನಃ ಕೃಷ್ಣಾಂ ನೃತ್ಯನ್ನೇವ ಸಭಾತಳೇ ।

ಅಪತಿರ್ಹ್ಯಸಿ ಕಲ್ಯಾಣಿ ಗಚ್ಛ ದುರ್ಯ್ಯೋಧನಾಲಯಮ್               ॥೨೧.೩೯೮॥

ಮತ್ತೆ ಕುಣಿಯುತ್ತಲೇ ದ್ರೌಪದಿಗೆ ಹೀಗೆ ಹೇಳುತ್ತಾನೆ,

ಓ ಚೆಲುವೇ, ಗಂಡಂದಿರು ಇದ್ದೂ ನೀನೀಗ ಪತಿವಿಹೀನೆ.

ನಿನ್ನ ಗಂಡಂದಿರೆಲ್ಲಾ ಈಗ ಪ್ರಯೋಜನವಿರದ ಪಡೆ,

ಒಳ್ಳೆಯ ಗಂಡ ಬೇಕಿದ್ದರೆ ದುರ್ಯೋಧನನ ಕಡೆ ನಡೆ 

 

ಏತೇSಖಿಲಾಃ ಷಣ್ಢತಿಲಾಸ್ತಮೋsನ್ಧಮಾಪ್ತಾ ನಚೈಷಾಂ ಪುನರುತ್ಥಿತಿಃ ಸ್ಯಾತ್ ।

ಇತಿ ಬ್ರುವಾಣೋSನುಚಕಾರ ಭೀಮಂ ತದಾSಹಸನ್ ಧಾರ್ತ್ತರಾಷ್ಟ್ರಾಶ್ಚ ಸರ್ವೇ ॥೨೧.೩೯೯॥

ಇವರೆಲ್ಲಾ ಎಣ್ಣೆಯಿರದ ಜೊಳ್ಳು ಕಾಳಿನಂತೆ,

ಇವರದು ಕತ್ತಲಿಂದ ಏಳಲಾಗದ ಹೀನ ಕತೆ.

ಹೀಗ್ಹೇಳುತ್ತಾ ದುಶ್ಯಾಸನ ಅಣಕಿಸುತ್ತಾನೆ ಭೀಮನ ನಡಿಗೆ,

ಆ ವಕ್ರ ಅಣಕಿಗೆ ಬಂತು ದುರ್ಯೋಧನಾದಿಗಳ ಗಟ್ಟಿ ನಗೆ.

 

ತದಾSಕರೋದ್ ಭೀಮಸೇನಃ ಪ್ರತಿಜ್ಞಾಂ ಹನ್ತಾಸ್ಮಿ ವೋ ನಿಖಿಲಾನ್  ಸಙ್ಗರೇSಹಮ್ ।

ಇತೀರಿತೇ ಶರಣಂ ದ್ರೋಣಮೇವ ಜಗ್ಮುಃ ಸಮಸ್ತಾ ಧೃತರಾಷ್ಟ್ರಪುತ್ರಾಃ    ॥೨೧.೪೦೦॥

ಆಗ ಭೀಮ ಮತ್ತೊಂದು ಪ್ರತಿಜ್ಞೆ ಮಾಡುತ್ತಾನೆ,

ಯುದ್ಧದಲ್ಲಿ ನಾನು ನಿಮ್ಮೆಲ್ಲರನ್ನು ಕೊಲ್ಲುತ್ತೇನೆ.

ಈ ರೀತಿಯಾಗಿ ಭೀಮಸೇನ ಹೇಳುತ್ತಿರುವಾಗ,

ಕೌರವರೆಲ್ಲ ದ್ರೋಣರಲ್ಲಿ ಮೊರೆಹೋಗುವರಾಗ.

 

 

[ಏಕೆ ದ್ರೋಣರನ್ನು ರಕ್ಷಕನನ್ನಾಗಿ ಹೊಂದಿದರು ಎಂದರೆ:]

 

ಯತ್ರ ದ್ರೋಣಸ್ತತ್ರ ಪುತ್ರಸ್ತತ್ರ ಭೀಷ್ಮಃ ಕೃಪಸ್ತಥಾ ।

ನಚಾತ್ಯೇತಿ ಗುರೂನ್ ಭೀಮ ಇತಿ ತಂ ಶರಣಂ ಯಯುಃ             ॥೨೧.೪೦೧॥

ಎಲ್ಲಿ ದ್ರೋಣರಿರುತ್ತಾರೋ ಅಲ್ಲಿರುವ ದ್ರೋಣಪುತ್ರ ಅಶ್ವತ್ಥಾಮ,

ಅವರಿಬ್ಬರಿರುವಲ್ಲೇ ಭೀಷ್ಮ ಕೃಪರಿರುವಂಥ ಅಲಿಖಿತ ನಿಯಮ.

ಭೀಮನೆಂದೂ ಗುರುಹಿರಿಯರ ಅತಿಕ್ರಮಿಸುವುದಿಲ್ಲ,

ಇದಕ್ಕಾಗಿಯೇ ಕೌರವರು ದ್ರೋಣರ ಮೊರೆಹೋದ ಜಾಲ.

 

ಅಬ್ರವೀದ್ ಧಾರ್ತ್ತರಾಷ್ಟ್ರಾಂಶ್ಚ ದ್ರೋಣೋ ವಿಪ್ರೋSಪಿ ಸನ್ನಹಮ್ ।

ಸಪುತ್ರಃ ಸಕೃಪಃ ಶಸ್ತ್ರಂ ಗ್ರಹೀಷ್ಯೇ ಭವತಾಂ ಕೃತೇ                  ॥೨೧.೪೦೨॥

ದ್ರೋಣರು ಹೇಳುತ್ತಾರೆ-ನಾನು ಬ್ರಾಹ್ಮಣನಾದರೂ ನನ್ನ ಮಗನ ಕೂಡಿ ನಿಮಗೀವೆ ರಕ್ಷಣೆ,

ಮಗ ಮತ್ತು ಕೃಪರಿಂದ ಕೂಡಿದವನಾಗಿ ಶಸ್ತ್ರ ಹಿಡಿದು ನಿಮ್ಮ ರಕ್ಷಿಸುವುದೆನ್ನ ಹೊಣೆ.

 

ರಕ್ಷಣೇ ಭವತಾಂ ಚೈವ ಕುರ್ಯ್ಯಾಂ ಯತ್ನಂ ಸ್ವಶಕ್ತಿತಃ ।

ನತು ಭೀಮಾದ್ ರಕ್ಷಿತುಂ ವಃ ಶಕ್ತಃ ಸತ್ಯಂ ಬ್ರವೀಮ್ಯಹಮ್             ॥೨೧.೪೦೩॥

ನಿಮ್ಮ ರಕ್ಷಣೆಗಾಗಿ ನನ್ನದು ಶಕ್ತ್ಯಾನುಸಾರ ಹೋರಾಟ,

ಭೀಮನಿಂದ ನಿಮ್ಮ ರಕ್ಷಿಸುವುದು ಅಸಾಧ್ಯ - ಇದು ದಿಟ.

 

ತತೋ ಯಯುಃ ಪಾಣ್ಡವಾಸ್ತೇ ಸಭಾಯಾ ವನಾಯ ಕೃಷ್ಣಾಸಹಿತಾಃ ಸುಶೂರಾಃ ।

ಗತ್ಯಾSನುಚಕ್ರೇ ಯುವಸಿಂಹಖೇಲಗತಿಂ ಭೀಮಂ ಧಾರ್ತ್ತರಾಷ್ಟ್ರೋSಪಹಸ್ಯ             ॥೨೧.೪೦೪॥

ಆನಂತರ ಪಾಂಡವರು ದ್ರೌಪದಿಯೊಡಗೂಡಿ ಸಭೆಯಿಂದ ಹೊರಹೋಗುವ ದೃಶ್ಯ,

ದುರ್ಯೋಧನ ಭೀಮನ ಸಿಂಹನಡೆ ಅನುಕರಿಸುತ್ತ ಮಾಡುತ್ತಾನೆ ಅವರ ಅಪಹಾಸ್ಯ.

 

ದೃಷ್ಟ್ವಾ ಸಭಾಯಾ ಅರ್ದ್ಧನಿಷ್ಕ್ರಾನ್ತದೇಹೋ ವ್ಯಾವೃತ್ಯ ಭೀಮಃ ಪ್ರಾಹ ಸಂರಕ್ತನೇತ್ರಃ ।

ಊರುಂ ತವಾನ್ಯಂ ಚ ರಣೇ ವಿಭೇತ್ಸ್ಯ ಇತ್ಯುಕ್ತ್ವಾSಸೌ ನಿರ್ಗ್ಗತೋSಸತ್ಸಭಾಯಾಃ ॥೨೧.೪೦೫॥

ಹೊರಹೊರಟ ಭೀಮ ಹಿಂದಿರುಗಿ ನೋಡುತ್ತಾನೆ,

ಕೆಂಪಾದ ಕಂಗಳುಳ್ಳವನಾಗಿ ಹೀಗೆ ಹೇಳುತ್ತಾನೆ.

ನಿನ್ನ ಇನ್ನೊಂದು ತೊಡೆಯನ್ನೂ ಯುದ್ಧದಿ ಮುರಿಯುತ್ತೇನೆ,

ಹೀಗೆಂದು ಹೇಳುತ್ತಾ ಆ ಬಲು ಕೆಟ್ಟ ಸಭೆಯಿಂದ ನಡೆಯುತ್ತಾನೆ.


 [Contributed by Shri Govind Magal]

No comments:

Post a Comment

ಗೋ-ಕುಲ Go-Kula