Wednesday 18 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 68-74

 

[ಹದಿನಾಲ್ಕನೇ ವರ್ಷದಲ್ಲಿಯಾದರೂ ಧರ್ಮರಾಜ ಅಧರ್ಮಿಗಳ ವಿರುದ್ಧ ಯುದ್ಧಕ್ಕೆ ತೆರಳಬೇಕು, ಆ ಗುರಿ ಮುಟ್ಟಲು ತೀವ್ರವಾದ ಮಾತಿನೌಷಧವನ್ನು ಕೊಡಬೇಕು -ಅದಕ್ಕಾಗಿ ಭೀಮ ದ್ರೌಪದಿಯನ್ನು ಕಳುಹಿಸಿದ. ಅವಳು ಧರ್ಮರಾಜನನ್ನು ಕುರಿತು ಮಾತನಾಡಿದಳು:]

 

ನೈವ ಕ್ಷಮಾ ಕುಜನತಾಸು ನೃಪಸ್ಯ ಧರ್ಮ್ಮಸ್ತಾಂ ತ್ವಂ ವೃಥೈವ ಧೃತವಾನಸಿ ಸರ್ವಕಾಲಮ್ ।

ಇತ್ಯುಕ್ತ ಆಹ ನೃಪತಿಃ ಪರಮಾ ಕ್ಷಮೈವ ಸರ್ವತ್ರ ತದ್ವಿಧೃತಮೇವ ಜಗತ್ ಸಮಸ್ತಮ್ ॥೨೨.೬೮॥

 

ಕರ್ತ್ತಾ ಚ ಸರ್ವಜಗತಃ ಸುಖದುಃಖಯೋರ್ಹಿ ನಾರಾಯಣಸ್ತದನುದತ್ತಮಿಹಾಸ್ಯ ಸರ್ವಮ್ ।

ತಸ್ಮಾನ್ನ ಕೋಪವಿಷಯೋsಸ್ತಿ ಕುತಶ್ಚ ಕಶ್ಚಿತ್ ತಸ್ಮಾತ್ಕ್ಷಮೈವ ಸಕಲೇಷು ಪರೋSಸ್ಯ ಧರ್ಮ್ಮಃ ॥೨೨.೬೯॥

ದುರ್ಜನರಲ್ಲಿ ಸಹನೆಯು ಒಳ್ಳೆಯದಲ್ಲ, ಕೆಟ್ಟವರಲ್ಲಿ ಸಹನೆಯು ಎಂದೂ ಸಲ್ಲ.

ಕ್ಷಮಿಸುವುದವರನ್ನು ಪಾಪಕ್ಕೆ ಕಾರಣ, ನಿನ್ನದು ಯಾವಾಗಲೂ ಕ್ಷಮಾಧಾರಣ.

ಇದನ್ನೆಲ್ಲಾ ಕೇಳಿಸಿಕೊಂಡ ಧರ್ಮರಾಜ ಹೇಳುತ್ತಾನೆ, ಕ್ಷಮೆಯೇ ಒಳ್ಳೆಯದು :ಅದರಿಂದಲೇ ಜಗದ ಚಾಲನೆ.

ಪ್ರಪಂಚಕ್ಕೆಲ್ಲಾ ಸುಖ ದುಃಖ ಕೊಡುವವನು ಶ್ರೀಹರಿ, ಸಿಟ್ಟಾಗದೇ ಅವನು ಕೊಟ್ಟದ್ದನ್ನು ಒಪ್ಪುವುದೇ ಸರಿ.

ಪ್ರತಿಯೊಂದೂ ಭಗವಂತನ ಪ್ರೇರಣೆ, ಸಲ್ಲದು ಯಾರಲ್ಲೂ ಕೋಪದ ಧೋರಣೆ.

ಕ್ಷಮೆಯೊಂದೇ ಪರಮ ಧರ್ಮ, ನನ್ನ ಪ್ರಯತ್ನವೇನಿಲ್ಲ ಎಂಬ ಮರ್ಮ.

 

ಇತ್ಯುಕ್ತವನ್ತಂ ನೃಪಮಾಹ ಪಾರ್ಷತೀ ಯದಿ ಕ್ಷಮಾ ಸರ್ವನರೇಷು ಧರ್ಮ್ಮಃ ।

ರಾಜ್ಞಾ ನ ಕೃತ್ಯಂ ನಚ ಲೋಕಯಾತ್ರಾ ಭವೇಜ್ಜಗತ್ ಕಾಪುರುಷೈರ್ವಿನಶ್ಯೇತ್ ॥೨೨.೭೦॥

ಹೀಗೆಂದ ಧರ್ಮರಾಜನಿಗೆ ದ್ರೌಪದಿ ಹೇಳುತ್ತಾಳೆ, ಕ್ಷಮೆಯೇ ಸಾಕಾದರೆ ರಾಜನೇಕೆಂದು ಕೇಳುತ್ತಾಳೆ.

ಲೋಕದ ನಡವಳಿಕೆಗೆ ಏನಿರುತ್ತದೆ ಅರ್ಥ, ರಾಜ ದೇಶ ಸಂವಿಧಾನ ಎಲ್ಲವೂ ವ್ಯರ್ಥ.

ಸ್ತಬ್ದವಾಗುತ್ತದೆ ಲೋಕದ ವ್ಯವಹಾರ, ಹೇಡಿಗಳಿಂದಾಗುತ್ತದೆ ಜಗದ ಸಂಹಾರ.

 

ಸತ್ಯಂ ಚ ವಿಷ್ಣುಃ ಸಕಲಪ್ರವರ್ತ್ತಕೋ ರಮಾವಿರಿಞ್ಚೇಶಪುರಸ್ಸರಾಶ್ಚ ।

ಕಾಷ್ಠಾದಿವತ್ ತದ್ವಶಗಾಃ ಸಮಸ್ತಾಸ್ತಥಾsಪಿ ನ ವ್ಯರ್ತ್ಥತಾ ಪೌರುಷಸ್ಯ ॥೨೨.೭೧॥

ಸರ್ವತಂತ್ರ ಸ್ವತಂತ್ರ ನಾರಾಯಣನೇ ಸಕಲ ಪ್ರವರ್ತಕನೆನ್ನುವುದು ಪರಮ ಸತ್ಯ,

ಲಕ್ಷ್ಮೀ ಬ್ರಹ್ಮ ರುದ್ರಾದಿ ದೇವತೆಗಳು ಅವನ ಬೊಂಬೆಗಳಂತೆಂಬುದೂ ಸಮ್ಮತ.

ಇಷ್ಟಿದ್ದರೂ ಪುರುಷ ಪ್ರಯತ್ನ ಆಗುವುದಿಲ್ಲ ವ್ಯರ್ಥ,

ಪುರುಷ ಪ್ರಯತ್ನವೇ ಬೇಡವೆಂಬುದದು ಅಸಂಗತ.

 

ತದಾಜ್ಞಯಾ ಪುರುಷಶ್ಚೇಷ್ಟಮಾನಶ್ಚೇಷ್ಟಾನುಸಾರೇಣ ಶುಭಾಶುಭಸ್ಯ ।

ಭೋಕ್ತಾ ನ ತಚ್ಚೇಷ್ಟಿತಮನ್ಯಥಾ ಭವೇತ್ ಕರ್ತ್ತಾ ತಸ್ಮಾತ್ ಪುರುಷೋSಪ್ಯಸ್ಯ ವಶ್ಯಃ ॥೨೨.೭೨॥

ಭಗವಂತನ ಆಜ್ಞೆಯಿಂದಲೇ ಕ್ರಿಯೆಗಳನ್ನು ಮಾಡುತ್ತಾನೆ ಜೀವ,

ಆ ಕ್ರಿಯೆಗಳಿಗನುಗುಣವಾಗಿ ಅವನಿಗೆ ಪಾಪ ಪುಣ್ಯಗಳ ಪ್ರಭಾವ.

ಕೆಟ್ಟದ್ದನ್ನು ಮಾಡಿದರೆ ಬರುವುದು ದುಃಖ -ಪಾಪ,

ಒಳ್ಳೆಯದನ್ನು ಮಾಡಿದರೆ ಸುಖ-ಪುಣ್ಯದ ಲೇಪ.

ಜೀವನಲ್ಲಿ ಇರುವುದು ಭಗವದ್ ವಶವಾದಂಥ ಕರ್ತೃತ್ವ,

ಅಸ್ವತಂತ್ರ ಕರ್ತೃತ್ವವಿದೆ:ಕರ್ತೃತ್ವವೇ ಇಲ್ಲವೆಂದಲ್ಲ ತತ್ವ.

 

ವೃಥಾ ಯದಿ ಸ್ಯಾತ್ ಪೌರುಷಂ ಕಸ್ಯ ಹೇತೋರ್ವಿಧಿರ್ನ್ನಿಷೇಧಶ್ಚ ಸಮಸ್ತವೇದಗಃ ।

ವಿಧೇರ್ನ್ನಿಷೇಧಸ್ಯ ಚ ನೈವ ಗೋಚರಃ ಪುಮಾನ್ ಯದಿ ಸ್ಯಾದ್ ಭವತೋ ಹಿ ತೌ ಹರೇಃ ॥೨೨.೭೩॥

ಪುರುಷ ಪ್ರಯತ್ನ ವ್ಯರ್ಥವಾದರೆ ವಿಧಿ ನಿಷೇಧ ಯಾರಿಗೆ?

ಜೀವ ಕರ್ತೃವಲ್ಲವಾದರೆ ವಿಧಿನಿಷೇಧ ಹೇಳಿದ್ದು ದೇವರಿಗೆ?

 

ತೇನೈವ ಲೇಪಶ್ಚ ಭವೇದಮುಷ್ಯ ಪುಣ್ಯೇನ ಪಾಪೇನ ಚ ನೈವ ಚಾಸೌ ।

ಲಿಪ್ಯೇತ ತಾಭ್ಯಾಂ ಪರಮಸ್ವತನ್ತ್ರಃ ಕರ್ತ್ತಾ ತತಃ ಪುರುಷೋSಪ್ಯಸ್ಯ ವಶ್ಯಃ ॥೨೨.೭೪॥

ಒಂದೊಮ್ಮೆ ದೇವರಿಗೆ ಹೇಳಿದ್ದರೆ ಅವನಿಗೆ ಪುಣ್ಯ ಪಾಪದ ಲೇಪ,

ಏನೂ ಮಾಡದ ಜೀವಗೆಲ್ಲಿಂದ ಬಂದೀತು ಪುಣ್ಯ ಅಥವಾ ಪಾಪ.

ಸರ್ವಸ್ವತಂತ್ರ ನಿರತಿಶಯ ಕರ್ತೃ ಹರಿಗೆ ಏನೇನೋ ಕಟ್ಟುಪಾಡು,

ಪುಣ್ಯ ಪಾಪಗಳ ಲೇಪವಾಗಿ ಅವನ ಸ್ವಾತಂತ್ರ್ಯ ನಾಶಕ್ಕದು ಜಾಡು.

ಹಾಗೊಮ್ಮೆ ಆದರೆ ಭಗವದ್ ಸ್ವಾತಂತ್ರ್ಯದ ನಾಶ,

ಕಳಚಿ ಹೋಗುತ್ತದೆ ಜಗದ್ ವ್ಯವಸ್ಥೆಯ ಪಾಶ.

ಭಗವಂತ ಎಂದೂ ಸರ್ವಸ್ವತಂತ್ರ ಸರ್ವೋತ್ತಮ,

ಅವನಧೀನವಾಗಿಯೇ ಜೀವನ ಕರ್ಮದ ಮರ್ಮ.

ಎಂದೂ ಪುಣ್ಯ ಪಾಪಗಳ ಲೇಪವಿರದವನು ಭಗವಂತ,

ಅವನಧೀನ ಕರ್ತೃವಾಗಿ ಜೀವನ ಕರ್ಮವೆಂಬುದು ಸಮ್ಮತ.


 [Contributed by Shri Govind Magal]

No comments:

Post a Comment

ಗೋ-ಕುಲ Go-Kula