Friday 6 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 368-373

 

ಅರ್ಜ್ಜುನಾರ್ಜ್ಜುನ ನೈವಾತ್ರ ಕ್ಷಮಾ ಮೇ ತಾತ ರೋಚತೇ ।

ಪತಿತಸ್ಯಾಸ್ಯ ದೇಹಸ್ಯ ಕಾಷ್ಠವಿಷ್ಠಾಸಮಸ್ಯ ಚ                           ॥೨೧.೩೬೮॥

 

‘ಫಲಾನಿ ತ್ರೀಣಿ ಶಿಷ್ಯನ್ತೇ ವಿದ್ಯಾ ಕರ್ಮ್ಮ ಸುತಾ ಇತಿ ।

ಇತಿ ವೇದೋದಿತಂ ವಾಕ್ಯಂ ನ ಸುತೋ ದಾರದೂಷಣೇ              ॥೨೧.೩೬೯॥

 

ದುಷ್ಟದಾರೋ ನಚಾSಪ್ನೋತಿ ಲೋಕಾನರ್ದ್ಧೋ ಹಿ ದೂಷಿತಃ ।

ಅರಕ್ಷಣಾದ್ ದೂಷಿತಾಯಾ ನ ತ್ಯಾಗಾಚ್ಚ ಶುಭಂ ಭವೇತ್             ॥೨೧.೩೭೦॥

‘ಅರ್ಜುನಾ-ಪ್ರಿಯ ಅರ್ಜುನಾ : ಈ ವಿಷಯದಲ್ಲಿ ನನಗಿನ್ನು ಸಹನೆ ಇಷ್ಟವಾಗಲ್ಲ,

ಎಂದೋ ಒಮ್ಮೆ ಬೀಳುವ ಕಟ್ಟಿಗೆಯಂತಿರುವ ಈ ದೇಹಕ್ಕೆ ಮೂರೇ ಮೂರು ಫಲ.

ನಾವು ಗಳಿಸಿದ ಜ್ಞಾನ, ನಾವು ಮಾಡಿದ ನಮ್ಮ ಕರ್ಮ ಮತ್ತು ನಮ್ಮ ಸಂತಾನ,

ಇದಾಗಿದೆ ವೇದೋಕ್ತಿ ; ಸತಿಯ ಮಾನರಕ್ಷಣೆ ಮಾಡದವನು ಆಗಲ್ಲ ಮಾನ್ಯ.

ಅವನಿಗಿರುವುದಿಲ್ಲ ಒಳ್ಳೆಯ ಲೋಕದ ಪ್ರಾಪ್ತಿ,

ನಾಶವಾದಂತಲ್ಲವೇ ಗಂಡಿನ ಅರ್ಧಭಾಗ ಶಕ್ತಿ.

ನಿನ್ನಿಂದ ರಕ್ಷಣೆ ಸಿಗದೇ ಅವಳು ದೂಷಿತಳಾದರೆ,

ನಿನಗೆ ಸಿಗಲಾರದೆಂದೂ ಒಳ್ಳೆಯತನದ ಆಸರೆ.

 

ಅತೋSದ್ಯ ಸಾನುಬನ್ಧಕಾನ್ ನಿಹನ್ಮಿ ಧಾರ್ತ್ತರಾಷ್ಟ್ರಕಾನ್ ।

ಇತಿ ಬ್ರುವನ್ ವ್ಯಲೋಕಯದ್ ರಿಪೂನ್ ದಹನ್ನಿವೌಜಸಾ             ॥೨೧.೩೭೧॥

ಹೀಗಾಗಿ ನಾನೀಗಲೇ ಮಾಡಿ ಬಿಡುವೆ ಕೌರವಾದಿಗಳ ಸಂಹಾರ,

ಹೀಗ್ಹೇಳುತ್ತಾ ಭೀಮ ಶತ್ರುಗಳತ್ತ ಬೀರಿದ ನೋಟ ಸುಡುವಷ್ಟು ತೀವ್ರ.

 

ದದರ್ಶ ಚ ಮಹಾಘೋರಮಾದಾತುಂ ಪರಿಘಂ ರುಷಾ ।

ಕರ್ತ್ತುಂ ವ್ಯವಸಿತೋ ಬುದ್ಧ್ಯಾ ನಿಶ್ಶೇಷಾನ್ ಧೃತರಾಷ್ಟ್ರಜಾನ್    ॥೨೧.೩೭೨॥

ದುರ್ಯೋಧನಾದಿಗಳನ್ನು ನಿಶ್ಯೇಷ ಮಾಡಲೆಂದು,

ಮಾನಸಿಕ ಸಂಕಲ್ಪವಿದ್ದಂತಿತ್ತು ಭೀಮಸೇನನದು.

ಸಭಾಮಂಟಪದ ಆಧಾರಕಂಬವನವನು ನೋಡಿದ್ದು.

 

ತದಾ ಶಿವಾ ವವಾಶಿರೇ ಸುಯೋಧನಾಗ್ನಿಗೇಹತಃ ।

ತಥೈವ ತತ್ಪಿತುರ್ಗ್ಗೃಹೇSಪ್ಯಭೂದ್ ಭಯಾನಕಂ ಬಹು             ॥೨೧.೩೭೩॥

ಆಗ ದುರ್ಯೋಧನನ ಯಾಗಶಾಲೆಯಿಂದ ಹೆಣ್ಣು ನರಿಗಳ ಕರ್ಕಶ ಕೂಗಾಟ,

ಹಾಗೇ ಧೃತರಾಷ್ಟ್ರನ ಮನೆಯಲ್ಲಿ ಅತಿ ಭಯಂಕರ ಅಪಶಕುನಗಳ ನೋಟ.

 [Contributed by Shri Govind Magal]

No comments:

Post a Comment

ಗೋ-ಕುಲ Go-Kula