Thursday 5 May 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 309-314

[ಏಕೆ ಈ ಸಮಯದಲ್ಲೇ ಶ್ರೀಕೃಷ್ಣ ಇಂದ್ರಪ್ರಸ್ಥದಿಂದ ದ್ವಾರಕೆಗೆ ಮರಳಿದ್ದ ಎಂದರೆ: ದುರ್ಯೋಧನಾದಿಗಳು ಇಂದ್ರಪ್ರಸ್ಥದಿಂದ ಹಸ್ತಿನಾಪುರಕ್ಕೆ ತೆರಳುತ್ತಿದ್ದಂತೆ ಒಂದು ಘಟನೆ ನಡೆಯಿತು. ಆ ಘಟನೆಯನ್ನು ವಿವರಿಸುತ್ತಾರೆ:]

 

ಗತೇ ಹಿ ಪಾರ್ತ್ಥಸನ್ನಿಧೇಃ ಸುಯೋಧನೇ ತು ನಾರದಃ ।

ಶಶಂಸ ಧರ್ಮ್ಮಸೂನುನಾ ಪ್ರಚೋದಿತೋSರಿಮಾಗತಮ್   ॥೨೧.೩೦೯॥

 

ಕ ಉದ್ಯಮೀ ನೃಪೇಷ್ವತಿ ಪ್ರಪೃಷ್ಟ ಆಹ ನಾರದಃ ।

ಸ ಸೌಭರಾಡ್ ವರಂ ಶಿವಾದವಾಪ ವೃಷ್ಣಿನಿರ್ಜ್ಜಯಮ್              ॥೨೧.೩೧೦॥

 

ಪಾಂಸುಮುಷ್ಟಿಂ ಸಕೃದ್ಗ್ರಾಸೀ ಬಹೂನಬ್ದಾಂಸ್ತಪಶ್ಚರನ್ ।

ಆಜಗಾಮ ಹರಾದಾಪ್ಯ ವರಂ ಕೃಷ್ಣಜಯೇ ಪುನಃ                      ॥೨೧.೩೧೧॥

ಪಾಂಡವರ ಸಭೆ ಬಳಿಯಿಂದ ದುರ್ಯೋಧನ ಅತ್ತ ಹೊರಟು ಹೋಗುತ್ತಾನೆ,

ಸಭೆಗೆ ಬಂದ ನಾರದರಲ್ಲಿ ಧರ್ಮರಾಜ ರಾಜರ ಸಿದ್ಧತೆ ಬಗ್ಗೆ ಕೇಳುತ್ತಾನೆ.

ರಾಜಸೂಯದ ನಂತರ ಶತ್ರುಗಳಿಲ್ಲದಿರುವಾಗ ಹೇಗಿದೆ ರಾಜರ ಯೋಚನೆ.

ನಾರದರೆಂದರು-ದೊರೆ ಸಾಲ್ವ ಶಿವನಿಂದ ಯಾದವರ ಗೆಲ್ಲುವ ವರ ಪಡೆದಿದ್ದಾನೆ.

ಸಾಲ್ವ ದಿನಕ್ಕೊಂದು ಬಾರಿ ಹಿಡಿ ಮಣ್ಣು ತಿನ್ನುತ್ತಿದ್ದ,

ಅದೇ ಸ್ಥಿತಿಯಲ್ಲಿ ಬಹಳ ವರ್ಷ ತಪಸ್ಸು ಮಾಡಿದ್ದ.

ಕೃಷ್ಣನ ಗೆಲ್ಲಲು ಶಿವನಿಂದ ವರ ಪಡೆದು ಬಂದಿದ್ದ.

 

ಸ ಶ್ರುತ್ವಾ ಮಾಗಧವಧಂ ದಿಶಾಂ ವಿಜಯಮೇವ ಚ ।

ರಾಜಸೂಯಂ ಕ್ರತುಂ ಚೈವ ಶಿಶುಪಾಲವಧಂ ತಥಾ                             ॥೨೧.೩೧೨॥

 

ಯದೂನ್ ಪ್ರತ್ಯುದ್ಯಮಂ ತೂರ್ಣ್ಣಂ ಕರೋತೀತಿ ನಿಶಮ್ಯ ತತ್ ।

ಸಮೈಕ್ಷದ್ ಧರ್ಮ್ಮಜಃ ಕೃಷ್ಣಮುಖಶೀತಾಂಶುಮಣ್ಡಲಮ್                       ॥೨೧.೩೧೩॥

 

ಸಾಲ್ವ;ಜರಾಸಂಧ ವಧೆ, ಪಾಂಡವರ ದಿಗ್ವಿಜಯ, ಶಿಶುಪಾಲ ವಧೆ ಬಗ್ಗೆ ಕೇಳಿದ್ದ,

ಶೀಘ್ರದಲ್ಲಿ ಯಾದವರ ಮೇಲೆ ಯುದ್ಧ ಮಾಡುವ ಸಿದ್ಧತೆಯನ್ನು ನಡೆಸಿದ್ದ.

ಇದೆಲ್ಲವನ್ನೂ ನಾರದರಿಂದ ಧರ್ಮರಾಜ ಕೇಳಿ ತಿಳಿದ,

ಹಸನ್ಮುಖಿ ಹೊಳೆವ ಚಂದ್ರಕಾಂತಿಯ ಕೃಷ್ಣಮೊಗವ ನೋಡಿದ.

[ಜರಾಸಂಧ ಹಾಗೂ ಶಿಶುಪಾಲ ಸತ್ತ ನಂತರ ಅವರ ಪಾಳೆಯದಲ್ಲಿ ಇರುವ ಸಾಲ್ವ ಕೃಷ್ಣನನ್ನು ಎದುರಿಸಲು ಬರುತ್ತಿದ್ದಾನೆ ಎನ್ನುವ ವಿಷಯವನ್ನು ನಾರದರು ಹೇಳಿದರು. ಸಾಲ್ವನ ಪ್ರಕಾರ ಪಾಂಡವರ ರಾಜಸೂಯಕ್ಕೆ ಕಾರಣ ಶ್ರೀಕೃಷ್ಣ. ಅದರಿಂದಾಗಿ ಕೃಷ್ಣನನ್ನು ಕೊಂದರೆ ಪಾಂಡವರನ್ನು ಸುಲಭದಲ್ಲಿ ಗೆಲ್ಲಬಹುದು ಎನ್ನುವುದು ಅವನ ಚಿಂತನೆ. ಅದರಿಂದಾಗಿ ದ್ವಾರಕಾಪಟ್ಟಣದಮೇಲೆ ದಾಳಿಯಿಡಲು ಸಾಲ್ವ ಬರುತ್ತಿದ್ದ.]

 

ಅಸ್ತ್ವಿತ್ಯುಕ್ತ್ವಾ ಸ ಗೋವಿನ್ದಃ ಪ್ರೇಷಯಾಮಾಸ ಯಾದವಾನ್ ।

ಪ್ರದ್ಯುಮ್ನಾದೀನ್ ದಿನೈಃ ಕೈಶ್ಚಿತ್ ಸ್ವಯಂ ಚಾಗಾತ್ ಸಹಾಗ್ರಜಃ             ॥೨೧.೩೧೪॥

ಅತಿ ಶಾಂತವಾಗಿ "ಆಗಲಿ "ಎಂದ ಭಗವಂತ,

ತನ್ನ ಮಗ ಪ್ರದ್ಯುಮ್ನಾದಿಗಳ ಕಳಿಸಿದ ದ್ವಾರಕೆಯತ್ತ,

ಒಂದೆರಡು ದಿನಗಳ ನಂತರ ಬಲರಾಮನೊಂದಿಗೆ,

ಕೃಷ್ಣಪರಮಾತ್ಮ ತಾನೂ ಹೊರಟ ದ್ವಾರಕೆಯೆಡೆಗೆ.

 

[ಶ್ರೀಕೃಷ್ಣ ದ್ವಾರಕೆಗೆ ತೆರಳಿದ ನಂತರ ವಿದುರ ಇಂದ್ರಪ್ರಸ್ಥಕ್ಕೆ ಬಂದಿರುವುದು].


[Contributed by Shri Govind Magal]


No comments:

Post a Comment

ಗೋ-ಕುಲ Go-Kula