Tuesday 9 February 2016

"ಪುರಂದರದಾಸರು" ಭಗವಂತನಿಗೆ ಹಾಡಿದ ಸುಪ್ರಭಾತ - ಭಾಗ 2

"ಕಾಸಿದ್ದ ಹಾಲುಗಳ ಕಾವಡಿಯೊಳ್ಹೆಪ್ಪಿಟ್ಟು  ಲೇಸಾಗಿ ಕೆನೆ-ಮೊಸರು ಬೆಣ್ಣೆಯನೆ ಮೆದ್ದು "...
ಈ ಬಾಹ್ಯ ಅರ್ಥದಲ್ಲಷ್ಟೇ ದಾಸರು ನಿಲ್ಲುವವರಲ್ಲ , ಅವರ ಆಸಕ್ತಿ ಕೇಂದ್ರೀಕೃತವಾಗಿರುವುದು ಇದರ ಅಧ್ಯಾತ್ಮದ ಮುಖದಲ್ಲಿ.... ಇದು ಭಗವಂತನನ್ನು ಕುರಿತು ಅವರು ಆಡಿದ ಮಾತು - "ಓ ಶ್ರೀನಿವಾಸನೆ, ನಾನು ಅನುಭವದ ಹಾಲಿನಿಂದ ತುಂಬಿರದ ಖಾಲಿ ಕಾವಡಿಯನ್ನು ಹೊತ್ತು ತಂದಿದ್ದೇನೆ... ಅದರಲ್ಲಿ ಪಕ್ವಾನುಭವದ ಬಿಸಿ ಹಾಲನ್ನು ತುಂಬು. ತುಂಬಿಟ್ಟು ಹೆಪ್ಪುಹಾಕಿ ಕೆನೆ ಮೊಸರು ಮಾಡು. ಮತ್ತೆ ಆ ಕೆನೆಮೊಸರನ್ನು ಕಡೆದು ಬೆಣ್ಣೆ ತೆಗೆ. ತೆಗೆದ ಆ ಬೆಣ್ಣೆಯನ್ನು ನೀನೇ ಮೆದ್ದು ಎದ್ದೇಳು".ಇದು ಇಲ್ಲಿಯ ಒಟ್ಟು ಭಾವ..

ಆದರೆ, ಹಾಲನ್ನು ಸಂಗ್ರಹಿಸಿ ತುಂಬಿಡುವುದು, ಹೆಪ್ಪುಹಾಕಿ ಕೆನೆಮೊಸರು ಮಾಡುವುದು, ಮೊಸರು ಕಡೆದು ಬೆಣ್ಣೆ ತೆಗೆಯುವುದು... ಈ ಎಲ್ಲ ಕ್ರಿಯೆ ನಮ್ಮೊಳಗೆ ನಿರಂತರ ನಡೆಯಬೇಕಾದದ್ದು ನಿಜ, ಆದರೆ ನಾವಾಗಿಯೇ ಇದನ್ನೆಲ್ಲ ಮಾಡಲಾರೆವು... ನಮಗೆ ಆ ಶಕ್ತಿಯೂ ಇಲ್ಲ.... ಋಗ್ವೇದದ ಒಂದು ಮಂತ್ರ ಹೇಳಿತು - "ನ ಋತೇ ತ್ವತ್ ಕ್ರಿಯತೇ ಕಿಂಚನಾsರೇ"... (ದೂರದ ಕೆಲಸಗಳನ್ನಾಗಲಿ, ನನ್ನ ಬಳಿಯ - ನನ್ನದೇ ಆದ ಅಂತರಂಗದ ಕೆಲಸಗಳನ್ನಾಗಲಿ ನೀನಿಲ್ಲದೆ ನಾನಾಗಿಯೇ ಮಾಡಲಾರೆ)...

ಒಂದು ಉಪನಿಷತ್ ಮಂತ್ರ ಹೀಗಿದೆ :

ಘೃತಮಿವ ಪಯಸಿ ನಿಗೂಢಂ
ಭೂತೇ ಭೂತೇ ಚ ವಸತಿ ವಿಜ್ಞಾನಮ್ |
ಸತತಂ ಮಂಥಯಿತವ್ಯಂ
ಮನಸಾ ಮಂಥನಾಭೂತೇನ ||
(ಬ್ರಹ್ಮ ಬಿಂದೂಪನಿಷತ್)

ಪ್ರತಿಯೊಬ್ಬ ಸಾಧಕ ಜೀವನಲ್ಲಿಯೂ ವಿಜ್ಞಾನದ ಸೆಲೆ ಹುದುಗಿದೆ, ಹೇಗೆಂದರೆ -ಹಾಲಿನಲ್ಲಿ ಬೆಣ್ಣೆ ಹುದುಗಿರುವಂತೆ... ಮನಸ್ಸೆಂಬ ಕಡೆಗೋಲಿನಿಂದ ನಿರಂತರ ಕಡೆದು ಆ ಬೆಣ್ಣೆಯನ್ನು ಹೊರತೆಗೆಯಬೇಕು.... ಇದಕ್ಕೆ ಭಗವಂತನ ಅನುಗ್ರಹ ಬೇಕು, ಅವನೇ ಮಾಡಿಸಬೇಕು...
ಇದು ವೇದಕಾಲದ ಋಷಿಗಳು ತೋಡಿಕೊಂಡ ಅಳಲು... ಇದು ದಾಸರ ಅಳಲಾಗಿ ಕೂಡ ಈ ಹಾಡಿನಲ್ಲಿ ಮೂಡಿಬಂದಿದೆ... ಅದಕ್ಕಾಗಿಯೇ ಅವರ ಪ್ರಾರ್ಥನೆ ಭಗವಂತನಲ್ಲಿ :-

"ಈ ಕಾವಡಿಗೆ ಜೀವನಾನುಭವದ ಹಾಲನ್ನು ತುಂಬು ಓ ಭಗವಂತನೆ !
ನಾನೇ ಮಾಡಿದೆ ಎಂಬ ಅಹಂಕಾರದ ಹುಳಿಮದ್ಯ ತುಂಬಬೇಡ...
ತುಂಬಿದ ಹಾಲೂ ಹುಳಿತು ಕೆಡದಂತೆ ನೀನೇ ಹೆಪ್ಪುಹಾಕು...
ನೀನೇ ತೆಗೆದ ಆ ಬೆಣ್ಣೆ ನಿನಗೇ ಮೀಸಲು...
ನನ್ನ ಒಳಬಗೆಯ ಭಕ್ತಿ-ಜ್ಞಾನಗಳ ಬೆಣ್ಣೆಯನ್ನು ಲೇಸಾಗಿ ಮೆದ್ದು ಏಳು...
ಈ ಮೆಲ್ಲುವಿಕೆ ಕೂಡ ಒತ್ತಡಕ್ಕಾಗಿ ಅಲ್ಲ, ಅನಾಸಕ್ತಿಯಿಂದ ಕೂಡ ಅಲ್ಲ, ಲೇಸಾಗಿ....
ಚೆನ್ನಾಗಿ, ಹೊಟ್ಟೆತುಂಬ ಪ್ರೀತಿಯಿಂದ ಮೆಲ್ಲಬೇಕು ನೀನು ಓ ಶ್ರೀನಿವಾಸನೆ!"...

ಹೀಗೆ ಭಗವಂತನಲ್ಲಿ ಭಕ್ತನ ಕಳಕಳಿಯ ಪ್ರಾರ್ಥನೆಯಿದು... ಈ ಭಕ್ತಿಯ ಬೆಣ್ಣೆಯನ್ನು ಭಗವಂತ ಪ್ರೀತಿಯಿಂದ ಸ್ವೀಕರಿಸಿ ತೃಪ್ತನಾಗದೆ ಇದ್ದರೆ, ಸಾಧಕನ ಗತಿಯೇನು ?... ಭಕ್ತ ಭಗವಂತನನ್ನು ಪ್ರೀತಿಸಿದರೆ ಮಾತ್ರ ಸಾಲದು, ಭಗವಂತನೂ ಭಕ್ತನನ್ನು ಪ್ರೀತಿಸಬೇಕು. ಇಲ್ಲವಾದರೆ - "ನೀನೊಲಿಯದಿದ್ದರೆ ನಾನೊಲಿದು ಫಲವೇನು ?"

ಆದರೆ ಕಠೋಪನಿಷತ್ ಹೇಳಿತು : -"ಯಮೇವೈಷ ವೃಣುತೇ ತೇನ ಲಭ್ಯಃ |"

ಅಂದರೆ, ಯಾರ ಬಗೆಗೆ ಭಗವಂತ ಪ್ರೀತಿಯಿಂದ ಒಲಿಯುತ್ತಾನೊ ಅಂಥವರಿಗೆ ಮಾತ್ರ ಅವನು ಲಭ್ಯವಾಗುತ್ತಾನೆ....
ಆದ್ದರಿಂದ ದಾಸರು ಹೇಳುತ್ತಾರೆ "ನನ್ನಲ್ಲಿ ದೇವರನ್ನು ಒಲಿಸಿಯೇ ಬಿಡುವ  ಛಲವಿಲ್ಲ , ಅವನೊಲಿಯಬೇಕೆಂಬ ಹಂಬಲ ಮಾತ್ರ. ಒಲಿಯುವುದು, ಒಲಿದು ಉದ್ಧರಿಸುವುದು ಭಗವಂತನ ಇಚ್ಛೆಗೆ ಬಿಟ್ಟದ್ದು"...

ಈ ಸ್ಥಿತಿಯಲ್ಲು ಪುರಂದರದಾಸರಿಂದ ಬಂದ ಉದ್ಗಾರವೇ :-
 "ಶೇಷಶಯನನೆ ಏಳು, ಸಮುದ್ರ ಮಥನವ ಮಾಡು"....
ಇದು ಇಡಿಯ ಪದ್ಯದ ಅಂತರಂಗದ ಕೀಲಿಕೈ.... ಇಡಿಯ ಸುಪ್ರಭಾತದ ಮರ್ಮಸ್ಥಾನ... ಇದು ಅಧ್ಯಾತ್ಮದ ಆಳಕ್ಕೆ ನಮ್ಮನ್ನು ಕೊಂಡೊಯ್ಯಬಲ್ಲ ಮಾತಿನ ಕೊಂಡಿ... ಹಿಂದಿನ ಸಾಲುಗಳಲ್ಲಿ ಮೊಸರು ಕಡೆದು ಬೆಣ್ಣೆ ತೆಗೆವ ಮಾತು ಬಂದಿದೆ. ಅದೇ ಇಲ್ಲಿ ಸಮುದ್ರಮಥನವಾಯಿತು...
"ಜೀವನಾನುಭವದ ಹಾಲು ತುಂಬಿದ ಈ ಹೃದಯವೇ ಕ್ಷೀರ ಸಮುದ್ರ... ಕ್ಷೀರಸಮುದ್ರಶಾಯಿಯಾಗಿ ಪಾಲಕಡಲಲ್ಲಿ ಪವಡಿಸಿದವನೇ ಆ ಶ್ರೀಹರಿ, ಅವನೇ ಶ್ರೀನಿವಾಸ... ಮೂಲಾಧಾರದಿಂದ ಸಹಸ್ರಾರದ ತನಕ ಹಬ್ಬಿರುವ ಸುಷುಮ್ನಾ ನಾಡಿಯೇ ಸಾವಿರ ಹೆಡೆಯ ಶೇಷ. ಅಲ್ಲಿ ನೆಲೆಸಿದವನೇ ಶೇಷಶಯನ... ಅವನೇ "ನಾರಾಯಣ"...

ಈ ಹೃದಯ ಸಮುದ್ರದ ಮಥನ ನಿತ್ಯ ನಿರಂತರ ನಡೆಯಬೇಕು, ವಿಷವೆಲ್ಲ ತೊಲಗಿ ಅಮೃತ ಮೂಡಿಬರುವ ತನಕ ನಡೆಯುತ್ತಿರಬೇಕು... ಅದು ಈ ಶೇಷಶಯನನಿಂದಲೆ ನಡೆಯಬೇಕು. ಇದು ಭಕ್ತನ ಅನುದಿನದ ಬಯಕೆ. ಅದಕ್ಕೆಂದೇ ದಿನಬೆಳಗಾದರೆ ದಾಸರ ಪ್ರಾರ್ಥನೆ "ಸಮುದ್ರಮಥನವ ಮಾಡು"

ಈ ಅಧ್ಯಾತ್ಮದ ಅರ್ಥ ಅಗೆದಷ್ಟೂ ಆಳ. ನಮ್ಮ ದೇಹದೊಳಗೇ ಏಳು ಸಮುದ್ರಗಳಿವೆ... ಅದರಲ್ಲಿ ಭಗವಂತ ಶೇಷಶಾಯಿಯಾಗಿದ್ದಾನೆ... ಒಂದೊಂದು ಸಮುದ್ರವೂ ಮಥನವಾಗಬೇಕು, ಅದಕ್ಕಾಗೇ ದಾಸರು ಹಾಡುತ್ತಾರೆ :

"ಶೇಷಶಯನನೆ, ಏಳು ಸಮುದ್ರ(ಗಳ)ಮಥನವ ಮಾಡು"...

ನಮ್ಮೊಳಗಿರುವ ಅಧ್ಯಾತ್ಮದ ಅಭಿವ್ಯಕ್ತಿ ಕೇಂದ್ರಗಳಾದ ಏಳು ನಾಡೀಚಕ್ರಗಳೇ ಅಧ್ಯಾತ್ಮದ ಕಡಲುಗಳು... ಆ ಏಳು ನಾಡೀ ಚಕ್ರದ ಕೇಂದ್ರಗಳಲ್ಲಿ ನಾವು ಭಗವಂತನ ದರ್ಶನದ ದಿವ್ಯಾನುಭೂತಿ ಪಡೆಯಬೇಕು...

ಯೋಗಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿ ಈ ಜಾಗೃತಿ ಕೇಂದ್ರಗಳು ಏಳು ಇವೆ.... ನಮ್ಮ ದೇಹದಲ್ಲಿ ವೈದ್ಯವಿಜ್ಞಾನಿಗಳು ಗುರುತಿಸಿರುವ ಏಳು ನಿರ್ನಾಳ ಗ್ರಂಥಿಗಳು, ಈ ನಾಡೀ ಚಕ್ರಗಳನ್ನು ಪ್ರತಿನಿಧಿಸುವ ಭೌತಿಕ ಕೇಂದ್ರಗಳು... ಅವುಗಳ ಕ್ರಮ ಹೀಗಿದೆ :

ಮೂಲಾಧಾರ = Gonad
ಸ್ವಾಧಿಷ್ಠಾನ = Cells of Leydig
ಮಣಿಪೂರ = Adrenals
ಅನಾಹತ = Thymus
ವಿಶುದ್ಧಿ = Thyroid & Para Thyroid
ಆಜ್ಞಾ = Pineal
ಸಹಸ್ರಾರ = Pituitary

ಇವೇ ಆ ಏಳು ಕಡಲುಗಳು. ಇವುಗಳ ಮಥನದಿಂದ, ಇಲ್ಲಿ ಭಗವಂತನ ಅಭಿವ್ಯಕ್ತಿಯಾಗಬೇಕು....
(Contributed by Shri B S Harish)

No comments:

Post a Comment

ಗೋ-ಕುಲ Go-Kula