Saturday 13 February 2016

"ಪುರಂದರದಾಸರು" ಭಗವಂತನಿಗೆ ಹಾಡಿದ ಸುಪ್ರಭಾತ - ಭಾಗ 3

ನಮ್ಮ ದೇಹದಲ್ಲಿ ಈ ಏಳು ಚಕ್ರಗಳ ನೆಲೆಯನ್ನು ನೋಡೋಣ:

ಮೂಲಾಧಾರ: -    ಇದು ಮೊದಲ ನಾಡೀಚಕ್ರ,  ಇದು ನಮ್ಮ ದೇಹದ ಬೆನ್ನುಹುರಿಯ ಕೆಳಗಡೆ ಜನನೇಂದ್ರಿಯಕ್ಕೆ ತಾಗಿಕೊಂಡಿದೆ. ಇದೇ "ಕುಂಡಲಿನಿ". ಅಂದರೆ, ಕುಂಡಲ ಸುತ್ತಿ ಮಲಗಿರುವ ಹಾವು... ಇದು ಕೆಳಕ್ಕೆ ಮುಖಮಾಡಿ ಇರುವಷ್ಟು ಕಾಲ ಮನುಷ್ಯ ಪ್ರಾಪಂಚಿಕ ವೈಷಯಿಕ ಭೋಗಗಳಲ್ಲಿ ತೊಡಗಿರುತ್ತಾನೆ... ಒಮ್ಮೆ ಇದರ ಗತಿ ಊರ್ಧ್ವಮುಖವಾದರೆ ಅದು ತಲೆಯೆತ್ತಿ ಹೆಡೆಬಿಚ್ಚಿ ನಿಲ್ಲುತ್ತದೆ, ಆಗ ಮನುಷ್ಯ ಕೂಡ ವಿಷಯಾಸಕ್ತಿಯನ್ನು ಕಳೆದುಕೊಂಡು ಅಧ್ಯಾತ್ಮದತ್ತ ಒಲಿಯುತ್ತಾನೆ, ಸಾಧನೆಯ ಎತ್ತರಕ್ಕೆ ಏರುತ್ತಾನೆ... ಮನುಷ್ಯನ ಪ್ರವೃತ್ತಿಯನ್ನು ನಿಯಂತ್ರಿಸುವ ಮೂಲ ಕೇಂದ್ರವೇ ಈ "ಮೂಲಾಧಾರ ಚಕ್ರ"... ಇದೇ ಉಪ್ಪುನೀರಿನ ಸಮುದ್ರ... (Gonad)

ಸ್ವಾಧಿಷ್ಠಾನ :-   ನಾಭಿಯಿಂದ ಕೆಳಗಡೆ, ಕೆಳಹೊಟ್ಟೆಯ ಭಾಗದಲ್ಲಿರುವ ಚಕ್ರವೇ "ಸ್ವಾಧಿಷ್ಠಾನಚಕ್ರ"... ಈ ಎರಡನೆಯ ಕಡಲೆ "ಕಬ್ಬಿನ ರಸದ ಕಡಲು"  (Cells of Laydig)...

ಸಾಧಕ ಮೊದಲು ಮೂಲಾಧಾರವನ್ನು ಕಡೆದು ಜಾಗೃತಗೊಳಿಸಿ ಮೇಲೆ ಬಂದಾಗ, ಉಪ್ಪು ನೀರನ್ನು ಸ್ವಚ್ಛಗೊಳಿಸಿ, ಸಿಹಿನೀರಾಗಿ ಕಬ್ಬಿನ ರಸವಾಗಿಸುವುದೇ ಎರಡನೆಯ ಹಂತ....

ಮಣಿಪೂರ: - ಈ ನಾಡೀಚಕ್ರ ನಾಭಿಯ ಸ್ತರದಲ್ಲಿದೆ. ಇದೇ ಒಳಗಿನ ಮೂರನೆಯ ಕಡಲು, ಸುರಾರಸದ ಕಡಲು, ನಮ್ಮ ಕರ್ಮದ ಅಮಲೇರಿಸುವ, ಕರ್ಮಗ್ರಂಥಿಗಳನ್ನು ಜ‌ಾಗೃತಗೊಳಿಸುವ ಕೇಂದ್ರ... ಅದಕ್ಕೆಂದೇ ಇದು ಸುರಾಸಮುದ್ರ... ವೈದ್ಯ ವಿಜ್ಞಾನಿಗಳ ಭಾಷೆಯಲ್ಲಿ Adrenal Gland...

ಅನಾಹತ: - ನಮ್ಮ ಹೃದಯ ಕೋಶದಲ್ಲಿರುವ ನಾಡೀಚಕ್ರವೇ ಅನಾಹತ ಚಕ್ರ... ಇದೇ ನಾಲ್ಕನೆ ಕಡಲು. ತುಪ್ಪದ ಕಡಲು. ಇಲ್ಲಿದೆ ಭಕ್ತಿಯ ಬೆಣ್ಣೆ , ಸ್ನೇಹದ ತುಪ್ಪ.  ಈ ಅನಾಹತ ಚಕ್ರದಲ್ಲೆ
ಮಡುಗಟ್ಟಿದ ತುಪ್ಪ ಕರಗಿ ಹರಿಯಬೇಕು... ಅದನ್ನು ಭಗವಂತ ಸ್ವೀಕರಿಸಬೇಕು... ವೈದ್ಯಕೀಯ ಭಾಷೆಯಲ್ಲಿ ಇದೆ Thymus Gland.

ವಿಶುದ್ಧಿ :- ಇದು ಕಂಠ ಸ್ತರದಲ್ಲಿರುವ ಐದನೆಯ ಚಕ್ರ. ಇದನ್ನು ಇಂದ್ರಯೋನಿ ಅಂತಲೂ ಕರೆಯುತ್ತಾರೆ. ಇದೇ ತುಪ್ಪಕ್ಕೂ ಮೊದಲಿರುವ ಮೊಸರಿನ ಕಡಲು. ಅನಾಹತ ಚಕ್ರದ ಮೇಲೆ ಇರುವ ವಿಶುದ್ಧಿ ಚಕ್ರ... ಇದೇ Thyroid & Para thyroid..

ಆಜ್ಞಾಚಕ್ರ:  ಇದು ನಮ್ಮ ಭ್ರೂಮಧ್ಯದಲ್ಲಿರುವ ಆರನೇ ಕಡಲು. ಮೊಸರಿನ ಮೂಲಕ್ಕೆ ಹೋದಾಗ ಇರುವುದು ಹಾಲು. ಈ ಹಾಲಿನ ಕಡಲಿನಲ್ಲೆ , ಅಂದರೆ ಭ್ರೂಮಧ್ಯದಲ್ಲೆ ಕ್ಷೀರಸಾಗರದಲ್ಲಿ ನೆಲೆಸಿರುವ ಭಗವಂತನ ಬೆಳಕಿನ ಸಾಕ್ಷಾತ್ಕಾರ.. ಇದೇ ಆಜ್ಞಾಚಕ್ರದಲ್ಲಿ. ಇದೇ ಮೂರನೆಯ ಕಣ್ಣು.  ಒಳಗಣ್ಣು. ಈ ಚಕ್ರದ ಜಾಗೃತಿಯಿಂದ ಭೂತ ಭವಿಷ್ಯತ್ತುಗಳ ಪೂರ್ಣ ಅರಿವು. ಸಾಧನೆಯಲ್ಲಿ ನಾವು ಮುಂದೆ ಸಾಗಬೇಕಾದ ದಾರಿ ಯಾವುದು ಎಂಬ ಆಜ್ಞೆ ದೊರಕುವುದು ಈ ಕೇಂದ್ರದಲ್ಲಿ... ಅದಕೆಂದೆ ಇದು ಆಜ್ಞಾಚಕ್ರ.... ಇದೇ ಭೌತಿಕ ಕೇಂದ್ರವಾದ Pineal Gland... ಇಂದು ಪಾಶ್ಚಾತ್ಯ ವೈದ್ಯ ವಿಜ್ಞಾನ ಕೂಡ ಪೈನೀಯಲ್ ಗ್ರಂಥಿಯ ಚಟುವಟಿಕೆ ಅಥವಾ ಉದ್ದೇಶದ ಬಗೆಗೆ ಗುರುತಿಸಲು ಯಶಸ್ವಿಯಾಗಿಲ್ಲ..

ಸಹಸ್ರ‌ಾರ: - ಇದೇ ಏಳನೆಯ ಕಡಲು. ನೆತ್ತಿಯ ಮೇಲೆ ಸಹಸ್ರಾರ ಚಕ್ರವಿದೆ... ಇದೇ ತಿಳಿನೀರಿನ ಕಡಲು. ಭಗವಂತನನ್ನು ತಿಳಿದು ಬಾಳೆಲ್ಲ , ಬಗೆಯೆಲ್ಲ ತಿಳಿಯಾದ ಸ್ಥಿತಿ ಇದು.. ಇದೇ ಭೌತಿಕ ಕೇಂದ್ರದಲ್ಲಿ Pituitary Gland.

ಸ್ವಾರಸ್ಯವೆಂದರೆ ತಿರುಪತಿಯ ಬೆಟ್ಟಗಳೂ ಏಳು.  ಆರು ಬೆಟ್ಟಗಳನ್ನು ದಾಟಿ ಏಳನೇ ಬೆಟ್ಟವನ್ನೇರಿದಾಗಲೇ ಶ್ರೀನಿವಾಸನ ದರ್ಶನ.. ಹಾಗೆ ನಮ್ಮ ಸಾಧನೆಯಲ್ಲಿ ಕೂಡ ಒಳಬಗೆಯಿಂದ ಸಾಧಕ ಏರಬೇಕಾದ ಏಳು ಮೆಟ್ಟಿಲುಗಳು... ಕೊನೆಯ ಮೆಟ್ಟಿಲನ್ನೇರಿದ ಮೇಲೆ ಮತ್ತೆ ಕೆಳಗಿಳಿಯುವ ಭಯವಿಲ್ಲ... ಎಲ್ಲ ಏರು ಮೆಟ್ಟಿಲುಗಳೆ ಹೊರತು ಇಳಿಮೆಟ್ಟಿಲುಗಳಿಲ್ಲ...

ಮುಂದುವರೆಯುವುದು...
(Contributed by Shri B S Harish)

1 comment:

ಗೋ-ಕುಲ Go-Kula