Wednesday 24 February 2016

Bhava Guccha 31

ಭಾವ ಗುಚ್ಛ  by “ತ್ರಿವೇಣಿ ತನಯ



ಗುರುವಂದನೆ

ಆಚಾರ್ಯ ಬನ್ನಂಜೆ ಅದ್ಭುತ ಅಧ್ಯಾತ್ಮ ಕವಿ,
ಅನುಭವದ ಮಂಥನಗಳ ಮೆಟ್ಟಿಲೇರಿದ ಅನುಭಾವಿ,
ಆಚಾರ್ಯ ಮಧ್ವರ ಪುರ್ಣಾನುಗ್ರಹದ ಅಂತರಂಗ ಭಕ್ತ,
ತತ್ವವಾದದ ತಿರುಳ ಬಗೆದು ಮೊಗೆದುಣಿಸುವಲ್ಲೇ ಆಸಕ್ತ,
ಹೃದಯಾಂತರಾಳದ ಒಂದೊಂದು ಮಾತೂ ಅದೆಷ್ಟು ಸವಿ,
ದುರ್ಮತ ದುರ್ವಾದಗಳ ಕತ್ತರಿಸೆಸೆಯುವ ಪವಿ.

ಆಚಾರ್ಯರಲ್ಲಿ ಕುಳಿತು ನುಡಿಸುವ ಭಗವಂತ,
ಕೇಳುಗನಲ್ಲಿದ್ದು ಕೇಳಿದಾಗಷ್ಟೇ ವರ್ಣನಾತೀತ,
ತೊಳೆವುದದು ಜನ್ಮಾಂತರದ ಕೊಳೆ,
ಹಸನಾದೀತು ಸಾಧನಾಂಕುರಕೆ ಮನವೆಂಬ ಇಳೆ.

ಮಗುವಿನಂಥಾ ಮುಗ್ಧ ನಗು,
ನಂಬಿದವರ ದುಗುಡ ಕಳೆವ ನಗು,
ಕುಹಕಿಗಳ ಚೇಷ್ಟೆ ಕಡಿವ ಅಲಗು,
ಅವರವರ ದೃಷ್ಟಿಯಂತೆ ಕಾಣುವ ದೈವೀ ಸೊಬಗು.

ಬನ್ನಂಜೆಯವರ ಬದುಕು ಮಧ್ವಮತಕೆ ಮೀಸಲು,
ತಿಳಿಸಿ ಹೇಳುವರುಂಟೆ ಸಮನ್ವಯಿಸಿ ಪ್ರತಿಸಾಲು,
ಬೀರುತಿದೆ ಶ್ರೀಗಂಧ ಸವೆಸವೆದು ತಾನು,
ಮಧ್ವ ಮಾನಸ ಕೊಳದಲಿ ಮುಳುಗೇಳುವ ಮೀನು.

ಸಾಮಾನ್ಯನಲ್ಲ ಈ ಗೃಹಸ್ಥ,
ಕೃಷ್ಣ ಮಧ್ವರ ನಡುವಿನ ಮಧ್ಯಸ್ಥ,
ಜ್ಞಾನ ಅನುಭವಗಳ ಭಂಡಾರ,
ಅಪರೂಪದ ಚೊಕ್ಕ ಬಂಗಾರ.


(Contributed by Shri Govind Magal)

1 comment:

  1. Divine! I have no words to express!

    Regards,
    Veena Rau

    ReplyDelete

ಗೋ-ಕುಲ Go-Kula