Wednesday 3 February 2016

Bhava Guccha 16

ಭಾವ ಗುಚ್ಛ by “ತ್ರಿವೇಣಿ ತನಯ”  

ಸ್ವಗತ

ಇತ್ತಿಲ್ಲ ಈ ಜನ್ಮಕೆ ಸಂಸ್ಕೃತ ಭಾಷೆ,
ಕುಂದಿಲ್ಲ ಸಜ್ಜನರಿಂದ ಜ್ಞಾನ ಹೀರುವ ತೃಷೆ,
ಅರಿತವರು ಹೇಳುವರು ಭಾಷೆ ಮುಖ್ಯವಲ್ಲ,
ಬೇಕೆ ಭಾಷೆ ನಾಲಿಗೆಗೆ ಸವಿಯಲು ಬೆಲ್ಲ,
ಬೇಡುವೆನಾತನ ತಪ್ಪಿಸದಿರು ಸಜ್ಜನರ ಸಂಗ,
ಆ ಮೂಲಕ ತೊಳೆಯುತಲಿರು ಎನ್ನಂತರಂಗ.

ಮುಖವಾಡದ ಆಟ

ಒಳಗೊಂದು ಹೊರಗೊಂದು ಯಾತರದೀ ಬದುಕು,
ಯಾರ ಮೆಚ್ಚಿಸಲೀ ಆಟ ಸಾಕಪ್ಪಾ ಸಾಕು,
ಯಾರಿದ್ದರೇನಂತೆ ಬದುಕೊಂದು ನಾಟಕ,
ಬಿಡುಗಡೆಯಿಲ್ಲ ಒಳ-ಹೊರಗು ಒಂದಾಗದನಕ.

ನೋಟಿನ -note

ಲೋಕದೊಳಗೆಲ್ಲಾ ನೋಟಿನದೇ ಆಟ,
ಸಾಕು ಭ್ರಮೆಯ ಧಾವಂತದಾ ಓಟ,
ಸ್ಮಶಾಣಗಳಲ್ಲಿಲ್ಲ ನೋಟಿಡುವ. ತಿಜೋರಿ,
ಒಪ್ಪರಾ ಯಮಭಟರು ನೋಟು ಹಂಚುವ ಪರಿ.

ಆತ್ಮಾವಲೋಕನ

ಮನಶುದ್ಧವಾಗದ ಸ್ನಾನವದ್ಯಾಕೆ,
ಚಿತ್ತ ನಿಲ್ಲದ ಪೂಜೆಯದ್ಯಾಕೆ,
ಎತ್ತರಕ್ಕೇರದ ಉಪವಾಸವ್ಯಾಕೆ,
ಪ್ರಸಾದವಲ್ಲದ ತುತ್ತು ಅದ್ಯಾಕೆ,           
ಸತ್ಕಾರ್ಯಕ್ಕಿಲ್ಲದ ವಿತ್ತವದ್ಯಾಕೆ ,
ಹೊತ್ಹೊತ್ತಿಗೆ ಹರಿಯೆನದ ಮರ್ತ್ಯ ಜನ್ಮವದ್ಯಾಕೆ.

ಭಾಷೆಯ ಸೋಲು

ಭಾವನೆಗಳ ಪದಗಳಲಿ ಹಿಡಿದಿಡುವುದು ಬಲು ಕಷ್ಟ,
ಸುಲಭವಲ್ಲ ಪ್ರಯಾಸಕರ ಸಾಹಸವಿದು ಅತಿಕ್ಲಿಷ್ಟ,
ನೀನೊಂದು ಭಾವದಿಂದ ಜೋಡಿಸುವೆ ಪದಗಳ ಸರ,
ಅರ್ಥೈಸುವುದು ಓದುವವನ ಮನಕನುಸಾರ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula