Thursday 18 February 2016

"ಪುರಂದರದಾಸರು" ಭಗವಂತನಿಗಾಗಿ ಹಾಡಿದ ಸುಪ್ರಭಾತ - ಭಾಗ - 4

ಕುಂಡಲಿನಿಯಲ್ಲಿ ಮಲಗಿದ್ದ ಶೇಷ ಶಕ್ತಿಯನ್ನು  ಭಗವಂತನ ಅನುಗ್ರದಿಂದ ಎತ್ತರಕ್ಕೇರಿಸಿದಾಗಸಹಸ್ರಾರ ಚಕ್ರದಲ್ಲಿ ಶೇಷ ತನ್ನ ಸಾವಿರ ಹೆಡೆ ಬಿಚ್ಚಿ ನಿಲ್ಲುತ್ತಾನೆ... ಅಲ್ಲಿ ಪವಡಿಸಿದ ಶೇಷಶಯನನಾದ ಶ್ರೀನಿವಾಸ ಏಳು ಕಡಲುಗಳನ್ನು ಕಡೆದು ನಮ್ಮ ಭಕ್ತಿರಸದ ಬೆಣ್ಣೆಯಲ್ಲಿ ಮೂಡಿಬರಬೇಕು.. ಅದಕೆಂದೆ ದಾಸರು ಹಾಡಿದರು "ಶೇಷಶಯನನೆ, ಏಳು ಸಮುದ್ರಮಥನವ ಮಾಡು"...

ಈ ಏಳು ನಾಡೀಚಕ್ರಗಳಿಗೂ, ಸೂರ್ಯನ ಏಳು ಕುದುರೆಗಳಿಗೂ, ಅಂದರೆ ಸೂರ್ಯಕಿರಣದ ಏಳು ವರ್ಣಗಳಿಗೂ, ಅಗ್ನಿಯ ಏಳು ಜಿಹ್ವೆ (ಜ್ವಾಲೆ)ಗಳಿಗೂ ಪರಸ್ಪರವಾದ ಅಧ್ಯಾತ್ಮ ಸಂಬಂಧವಿದೆ.

ಈ ಏಳು ನಾಡೀಚಕ್ರಗಳಲ್ಲಿ ನಾಭಿ ಮತ್ತು ಮೂಲಾಧಾರದ ನಡುವಿನ ಚಕ್ರವನ್ನು ಈ ಎರಡರಲ್ಲೇ ಏಕೀಭವಿಸಿ ಆರೇ ಚಕ್ರಗಳನ್ನು ಕೆಲವು ಕಡೆ ಉಲ್ಲೇಖಿಸಿದ್ದಾರೆ :

"ಮೂಲೇ ಚ ನಾಭೌ ಹೃದಯೇಂದ್ರಯೋನಿ -

ಭ್ರೂಮಧ್ಯ ಮೂರ್ಧದ್ವಿಷಡಂತಕೇಷು|" (ತಂತ್ರಸಾರ ಸಂಗ್ರಹ)

ಮೂಲಾಧಾರ, ನಾಭಿ, ಹೃದಯ, ಕಂಠ, ಹುಬ್ಬುಗಳ ನಡುವಿನ ಭಾಗ ಮತ್ತು ನೆತ್ತಿಯಿಂದ 12 ಅಂಗಲು ಎತ್ತರದ ಪ್ರಭಾವಲಯ ಇವು ಆರು ನಾಡೀಚಕ್ರಗಳ ಸ್ಥಾನಗಳು...

ಪುರಂದರದಾಸರೇ ಇನ್ನೊಂದು ಹಾಡಿನಲ್ಲಿ ನಾಡೀಚಕ್ರಗಳು ಆರು ಅಂತ ಹಾಡಿದ್ದಾರೆ :

"ಆಧಾರ ಮೊದಲಾದ ಆರು | ಚಕ್ರ
ಶೋಧಿಸಿ ಬಿಡಬೇಕು ಈಷಣ ಮೂರು
ಸಾಧಿಸಿ ಸುಷುಮ್ನಾ ಏರು | ಅಲ್ಲಿ
ಭೇದಿಸಿ ನೀ ಪರಬ್ರಹ್ಮನ ಸೇರು"

ಒಂದು ದೃಷ್ಟಿಯಿಂದ ಇವೆಲ್ಲ ನಮ್ಮ ದೇಹದೊಳಗೇ ನೆಲೆಸಿರುವ ಒಂದೇ ಕಡಲು, ಅದಕ್ಕೆ ಏಳು ಸ್ತರಗಳಲ್ಲಿ ಏಳು ಹೆಸರುಗಳು... ಅದಕೆಂದೆ ದಾಸರು ಏಕವಚನದಲ್ಲೆಂಬಂತೆಯೆ ನುಡಿದರು : "ಸಮುದ್ರ ಮಥನವ ಮಾಡು"..

ಮುಂದಿನ ಸಾಲು-

"ದೇಶ ಕೆಂಪಾಯಿತೇಳಯ್ಯ ಹರಿಯೇ"

ಈ ಮಥನಕ್ರಿಯೆಗೆ ಸಾಧಕಜೀವ ಪಕ್ವಗೊಂಡು ಅಣಿಯಾದ ಬಗೆ ಇದು...

ಭೌತಿಕ ಪ್ರಪಂಚದಲ್ಲೂ ಅರುಣೋದಯವಾದಾಗ ಇರುಳ ಕತ್ತಲೆ ಸರಿದು ಉಷೆಯ ಕೆಂಪು ದಿಗ್ದೇಶಗಳನೆಲ್ಲ ತುಂಬುವ ಕಾಲ.. ಹೊರಗಿನಂತೆಯೆ ಒಳಗೂ ಒಂದು ದೇಶ ಇದೆ. ಅದೇ ನಮಗೆ ಸಾಧನೆಯ ಆದೇಶ ದೊರೆಯುವ ಪ್ರದೇಶ... ಇನ್ನೇನು ಅಂತರ್ಯಾಮಿಯ ಬಿಂಬೋದಯವಾಗಬೇಕು, ಆಗ ಉಷೆಯ ಕೆಂಬೆಳಕು ಆಜ್ಞಾಚಕ್ರದಲ್ಲಿ ಕಾಣಿಸುತ್ತದೆ... ಇದೇ ಮೂರನೆಯ ಕಣ್ಣು.. ಅಗ್ನಿನೇತ್ರ ತೆರೆದುಕೊಂಡಾಗ ಆ ಕೆಂಪು ಕಾಣಿಸಿಕೊಳ್ಳುತ್ತದೆ, ಮೂರು ಕಾಲಗಳೂ ತೆರೆದುಕೊಳ್ಳುತ್ತವೆ. ಅಂಥ ಸಾಧಕನಿಗೆ ಭೂತ ಭವಿಷ್ಯತ್ತುಗಳು ವರ್ತಮಾನದಷ್ಟೇ ಸಹಜ ಮತ್ತು ಸ್ಫುಟ... ಮುಂದೆ ಸಹಸ್ರಾರದಲ್ಲಿ ಸಹಸ್ರ ಕಿರಣಗಳೊಡನೆ ಉದಿಸುವ ಆ ದಿವ್ಯ ಸೂರ್ಯನ ದರ್ಶನಕ್ಕಾಗಿ ಭಕ್ತ ಕಾತರನಾಗಿದ್ದಾನೆ...

ಅಲ್ಲಿ "ಹರಿಯೇ" ಅನ್ನುವ ಸಂಬೋಧನೆ ತುಂಬ ಮಹತ್ವದ್ದು. 'ಹರಿ' ಎಂದರೆ ಸಂಸ್ಕೃತದಲ್ಲಿ ಸೂರ್ಯನೂ ಹೌದು, ನಾರಾಯಣನೂ ಹೌದು.. ಹೊರಗಿನ ಕತ್ತಲನ್ನು ಹರಿಸುವುದರಿಂದ ಸೂರ್ಯ ಹರಿ, ಒಳಗಿನ ಕತ್ತಲನ್ನು ಹರಿಸುವುದರಿಂದ ನಾರಾಯಣ ಹರಿ...

ಅದಕೆಂದೇ ಅವನನ್ನು "ಸೂರ್ಯನಾರಾಯಣ" ಎಂದೇ ಕರೆಯುತ್ತಾರೆ..

"ದಿನಮಣಿರ್ಭಾಸ್ವಾನ್ ವಿವಸ್ವಾನ್ ಹರಿಃ" ... 
"ಹರಿಂ ಹೃಷೀಕೇಶಮುದಾಹರಂತಿ"...

"ಏಳು ಹರಿಯೆ" ಎಂದರೆ "ಗಾಯತ್ರಿ ಪ್ರತಿಪಾದ್ಯನಾದ ನನ್ನ ಒಳಬಗೆಯ ಸೂರ್ಯನೆ, ಉದಿಸಿ ಬಾ " ಎಂದೇ ಅರ್ಥ... ನನ್ನ ಅಜ್ಞಾನವನ್ನೆಲ್ಲ ತೊಳೆದು ಬೆಳಕಾಗಿ ಬಾ, ನನ್ನ ಸಂಚಿತ ಕರ್ಮಗಳನ್ನೆಲ್ಲ ಪರಿಹರಿಸುವ ಹರಿಯಾಗಿ ಬಾ, ಆದ್ದರಿಂದಲೆ ಶೇಷಶಯನನ್ನು "ಹರಿಯೆ" ಎಂದರು ದಾಸರು..

"ಕ್ಷೀಯಂತೇ ಚಾಸ್ಯ ಕರ್ಮಾಣಿ
ತಸ್ಮಿನ್ ದೃಷ್ಟೆ ಪರಾವರೇ |"

(ಆ ಪರತತ್ವವನ್ನು ಕಂಡಾಗ ಜ್ಞಾನಿಯ ಕರ್ಮಗಳೆಲ್ಲ ನಾಶವಾಗಿ ಹೋಗುವುವು)

"ಜ್ಞಾನಾಗ್ನಿಃ ಸರ್ವ ಕರ್ಮಾಣಿ
ಭಸ್ಮಸಾತ್ ಕುರುತೇ ತಥಾ |"

(ಜ್ಞಾನದ ಬೆಂಕಿ ಕರ್ಮದ ಕಟ್ಟಿಗೆಯ ರಾಶಿಯನ್ನು ಸಂಪೂರ್ಣವಾಗಿ ಸುಟ್ಟು ಬಿಡುತ್ತದೆ)

ಇವೆಲ್ಲ ಮಾತುಗಳು - ಹರಿಯ ದರ್ಶನವಾದ ಮೇಲೂ ಪಾಪ ಪರಿಹಾರವಾಗದಿರುವುದುಂಟೇ ? ಎಂಬುದನ್ನು ಪುಷ್ಟೀಕರಿಸುತ್ತವೆ...


(ಮುಂದುವರೆಯುವುದು.... )

No comments:

Post a Comment

ಗೋ-ಕುಲ Go-Kula