ಭಾವ ಗುಚ್ಛ by “ತ್ರಿವೇಣಿ
ತನಯ”
ಶುಷ್ಕ ಕರ್ಮ
ಕರ್ಮದಲೇ ತೊಳಲದಿರು ಜ್ಞಾನ ಹೀರುತಲಿರು,
ಶುಷ್ಕ ಕರ್ಮವ ತೊರೆದು ಹರಿಸ್ಮರಣೆ ತೊರೆ ಸೇರು,
ದಣಿಯದಲೆ ಛಲದಿಂದ ಶುದ್ಧ ಜ್ಞಾನ ಭಕುತಿಯ ಕೋರು,
ನಿನ್ನೆದೆಯೊಳಗೆ ಹುಡುಕುತಿರು ಕೃಷ್ಣ ಕುಳಿತಿಹ ತೇರು.
ಅಗಣಿತನ ಆಳ ವಿಸ್ತಾರ
ಬ್ರಹ್ಮಾದಿದೇವತೆಗಳಿಗೂ ತಿಳಿದಿಲ್ಲ ಅವನ ಆಳ ವಿಸ್ತಾರ,
ಮಾತೆ ಮಾಯೆಗೂ ತಿಳಿಯದು ಅವನ ಮಹಿಮೆ ಅಪಾರ,
ಎಣಿಸುತಿಹಳಂತೆ ಲಕುಮಿ ಅವನ ಪಾದ ಧೂಳು ,
ತರ್ಕಿಸದೇ ಶರಣಾಗು ನೀನವ ಕಳಿಸಿದ ಕೂಲಿ ಆಳು.
ಮಡಿ -ಮೈಲಿಗೆ
ಅಪಾರ ಬಂಧು ಬಳಗವ ಕೊಟ್ಟೆ,
ಮಧ್ಯದಲಿ ಮಡಿ-ಮೈಲಿಗೆ ತಂದಿಟ್ಟೆ,
ಮಡಿ ಮೈಲಿಗೆಯ ಅಳೆವುದ್ಯಾವ ಮಾಪನ?
ಸರ್ವಜ್ಞನವನೇ ನಡೆಸಿಹ ಅವರವರ ಸಾಧನ!
ಸ್ಫುರಣೆ -ಕರುಣೆ
ಹೊಳೆವ ಚಿಂತನೆ ಚಿಮ್ಮಿ ಬರುವ ಸ್ಫುರಣೆ,
ಒಳಗಿದ್ದಾಡುವ ಅಂತರ್ಯಾಮಿಯ ಕರುಣೆ,
ಹೇಗೇ ಇಡು ಕೃಷ್ಣ ಜ್ಞಾನದ ಹಸಿವು ಕುಂದದಿರಲಿ,
ಮನ ಸಜ್ಜನ ಸಂಗಕೆ ಬಾಗಿ ಮೆತ್ತಿಕೊಂಡಿರಲಿ.
ಚಕ್ರಭ್ರಮಣ
"ನಾನು ನನ್ನದೆಂಬುದು"ಬಲು ದೊಡ್ಡ ಕಗ್ಗಂಟು,
ಎಂಥವರನೂ ಬಿಡದ "ಅಹಂ"ಕಾರದ ಗಂಟು,
ಅಂಟಂಟು ಸೇರಿ ಆಗುವುದು ಇಡಿಗಂಟು,
ಇಳಿಸಿಕೊಳ್ಳಲು ಮತ್ತೆ "ಚಕ್ರಭ್ರಮಣ"ಉಂಟು.
(Contributed by Shri Govind Magal)
No comments:
Post a Comment
ಗೋ-ಕುಲ Go-Kula