Friday 5 February 2016

Bhava Guccha 18

ಭಾವ ಗುಚ್ಛ by "ತ್ರಿವೇಣಿ ತನಯ" 


ಮೂರ್ಖ ತರ್ಕ

ನಿಯಮದಂತೆ ಮಾನವನೊಬ್ಬ ಮೂರ್ಖ,
ಬಿಸಿಯಿದ್ದಾಗ ತಂಪಾಗಿರಲೆಂಬ ತರ್ಕ ,
ತಂಪಾಗಿದ್ದರೆ ಬಿಸಿಯಿರಬೇಕಿತ್ತೆಂಬ ವಾದ,
ಯಾವಾಗಲೂ ಇರದುದರೆಡೆಗೇ ಸ್ವಾದ .

ಹುಟ್ಟು -ಸಾವು

ಪಂಚ ಭೌತಿಕ ತತ್ವಗಳು ಒಂದಾಗಿರುವುದೇ ಹುಟ್ಟು,
ಒಂದಾಗಿ ಒಂದೊಂದಾಗಿ ಬಿಡಲನುವಾಗುವುದೇ ಜೀವನದ ಗುಟ್ಟು,
ಬೇರೆ ಬೇರೆಯಾಗಿ ವಿಲಯನವಾಗುವುದೇ ಸಾವೆಂಬ ರಟ್ಟು,
ಇದನರಿತು ಬಾಳುತಲೆ ಹಳಸದಿಹ ಬುತ್ತಿಯ ಕಟ್ಟು .

ಎಳೆ ಮನ -ತಿಳಿ ಮನ

ಕೊಳೆಯಿರದ ಎಳೆವಯಸಿಗೆ ಒಲಿವ ವಾಸುದೇವ,
ಸಾಕ್ಷಾತ್ಕರಿಸಿಕೊಂಡರವನ ನಾರದ ಪ್ರಹ್ಲಾದ ಧ್ರುವ,
ಎಳೆಯಾಗಲಿ ಜೀವ ತಿಳಿಯಾಗಲಿ ಮನ,
ತಾಳ್ಮೆಯ ಮುಗ್ಧ ತಪಕೆ ಒಲಿವ ದೇವಕಿನಂದನ.

ಸ್ವತ್ತು -ಗತ್ತು


ಯಾರದೀ ಮನೆ ಮಠ ಯಾರ ಕಾರಬಾರು ಯಾರದೀ ಸ್ವತ್ತು.
ನಿನ್ನೆ ಅಪ್ಪನದು ಇಂದು ನನದು ನಾಳೆ ಯಾರದು ಯಾರಿಗೆ ಗೊತ್ತು,
ಹಠ ಬೇಡ ಛಲ ಬೇಡ ನೀನಿಲ್ಲಿ ಸಂಬಳದ ಕಾವಲುಗಾರ,
ಬೇಕು ಬೇಡಗಳ ನಿಯಂತ್ರಿಸುವವನು ಕಾಣದ ಸೂತ್ರಧಾರ.

ದೇಹಾ(ವಾ)ಲಯ

ಯೋಚಿಸಿನೋಡಲು ಶರೀರವಿದು ದೇವ ದೇವತೆಗಳ ಆಲಯ,
ನಡೆಯುತಿದೆ ವ್ಯಾಪಾರ ಕರ್ಮಕ್ಕನುಗುಣವಾದ ಆಯ ವ್ಯಯ,
ಒಪ್ಪಿ ಅನುಭವಿಸು ಅಭಿವ್ಯಕ್ತವಾಗುತಿಹ ಜೀವಸ್ವಭಾವ,
ಈ ಮರ್ಮವನರಿತು ಮೊರೆಯಿಡು ಹರಿ ಎಂದೆಂದಿಗೂ ಕಾವ .
[Contributed by Shri Govind Magal]

No comments:

Post a Comment

ಗೋ-ಕುಲ Go-Kula