Saturday 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 233-238

 

ತದೈವ ಮೈನ್ದೋ ವಿವಿದಶ್ಚ ಭೌಮೇ ಹತೇ ಸಖಾಯೌ ದಾನವಾವೇಶಯುಕ್ತೌ ।

ಆನರ್ತ್ತರಾಷ್ಟ್ರಂ ವಾಸುದೇವಪ್ರತೀಪೌ ವ್ಯನಾಶಯೇತಾಂ ವಾಸುದೇವೋsಥ ಚೋಚೇ             ॥೨೨.೨೩೩॥

ಇದೇ ಸಮಯದಲ್ಲಿ ಮೈಂದ ಮತ್ತು ವಿವಿದ,

ಎಂಬ ಕಪಿಗಳು ದಾನವರ ಆವೇಶದಿಂದ,

ಮಿತ್ರ ನರಕಾಸುರನ ಹತ್ಯೆಗೆ ಕೃಷ್ಣನಾಗಿದ್ದ ಕಾರಣ,

ಸೇಡಿನ ಭಾವದಿ ಮಾಡಿದರು ದ್ವಾರಕೆಯ ನಾಶನ.

 

ರಾಮಾಯ ಸೋSದಾದ್ ವರಮಬ್ಜನಾಭೋ ವದ್ಧ್ಯಾವೇತೌ ಭವತಾಂ ತೇsಪ್ಯವದ್ಧ್ಯೌ ।

ವರಾದ್ ವಿರಿಞ್ಚಸ್ಯ ತಥಾSಮೃತಾಶನಾದುಭೌ ಚ ಮೈನ್ದೋ ವಿವಿದೋ ಬ್ರಜೇತಿ             ॥೨೨.೨೩೪॥

 

ಯಾವಾಗ ಮೈಂದ ವಿವಿದರಿಂದ ದ್ವಾರಕೆಯ ನಾಶ ಆರಂಭವಾಗಿತ್ತು,

ಶ್ರೀಕೃಷ್ಣನಿಂದ ಬಲರಾಮಗೆ ಅವರನ್ನು ಕೊಲ್ಲುವ ಆದೇಶ ಸಿಕ್ಕಿತ್ತು.

ಅಮೃತಪಾನ ಮತ್ತು ಬ್ರಹ್ಮವರದಿಂದ ಅವರಾಗಿದ್ದರು ಅವಧ್ಯ,

ಆದರೆ ನಾರಾಯಣನ ವರವಿತ್ತು ಅವರ ಸಾವು ಬಲರಾಮನಿಂದ.

 

ಗತ್ವಾ ಸ ಮೈನ್ದಂ ಪ್ರಥಮಂ ಜಘಾನ ಕ್ರೋಧಾತ್ ಯುದ್ಧಾಯಾSಗತಂ ರೈವತಾಗ್ರೇ ।

ದಿನೇ ಪರಸ್ಮಿನ್ ವಿವಿದಂ ಜಘಾನ ಶಿಲಾ ವರ್ಷನ್ತಂ ಮುಸಲೇನಾಗ್ರ್ಯಕರ್ಮ್ಮಾ                 ॥೨೨.೨೩೫॥

ಯಾದವರೆಲ್ಲರ ಕ್ರೀಡೆ ಮತ್ತು ವಿಹಾರದ ಜಾಗ ಆಗಿತ್ತು ರೈವತ ಪರ್ವತ,

ಅಲ್ಲಿಗೆ ಕ್ರೋಧದಿ ಯುದ್ಧಕೆ ಬಂದ ಮೈಂದನಾದ ಬಲರಾಮನಿಂದ ಹತ.

ಮರುದಿನ ಕಲ್ಲುಮಳೆ ಸುರಿಸುತ್ತಿದ್ದ ವಿವಿದನಾದ ಒನಕೆಯಿಂದ ಮೃತ.

 

ತಯೋರಾವಿಷ್ಟೌ ತಾವಸುರೌ ತಮೋSನ್ಧಂ ಪ್ರಾಪ್ತೌ ಚ ತಾವಶಿವನೌ ಸ್ವಂ ಚ ಲೋಕಮ್ ।

ದುರ್ಯ್ಯೋಧನಸ್ಯಾSಸ ಪುತ್ರೀ ರತಿರ್ಯ್ಯಾ ಪೂರ್ವಂ ನಾಮ್ನಾ ಲಕ್ಷಣಾ ಕಾನ್ತರೂಪಾ             ॥೨೨.೨೩೬॥

ಮೈಂದ ವಿವಿದರಲ್ಲಿದ್ದ ಅಸುರರು ಸೇರಿದರು ಅಂಧಂತಮಸ್ಸು,

ಅಶ್ವೀದೇವತೆಗಳನ್ನು ತಮ್ಮ ಲೋಕಕ್ಕೆ ಕಳಿಸಿತ್ತು ಸಾತ್ವಿಕ ತಪಸ್ಸು.

ದುರ್ಯೋಧನನ ಮಗಳು ಹಿಂದೆ ರತಿಯಾಗಿದ್ದ ಕಾರಣ,

ತುಂಬಾ ಸುಲಕ್ಷಣವಾಗಿದ್ದವಳ ಹೆಸರಾಗಿತ್ತದು ಲಕ್ಷಣಾ.

 

ಸ್ವಯಮ್ಬರಸ್ಥಾಂ ತಾಂ ಬಲಾದೇವ ಸಾಮ್ಬೋ ಜಗ್ರಾಹ ಸಾ ಚೈನಮಾಸಾನುರಕ್ತಾ ।

ಬಲಾದ್ ಗೃಹೀತಾಂ ವೀಕ್ಷ್ಯ ತಾಂ ಕರ್ಣ್ಣಮುಖ್ಯಾ ದುರ್ಯ್ಯೋಧನಾದ್ಯಾ ಯುಯುಧುಃ ಕ್ರೋಧದೀಪ್ತಾಃ ॥೨೨.೨೩೭॥

ಸ್ವಯಂವರದಲ್ಲಿ ಕೃಷ್ಣಪುತ್ರ ಸಾಂಬನಿಂದವಳ ಬಲಾತ್ಕಾರದ ಅಪಹಾರ,

ಅವಳೂ ಸಾಂಬನಲ್ಲಿ ಆಸಕ್ತಳಾಗಿ ಅಂಕುರಿಸಿತ್ತು ಪರಸ್ಪರ ಪ್ರೀತಿ ಅಪಾರ.

ಸಾಂಬ ಎಲ್ಲರ ಧಿಕ್ಕರಿಸಿ ಅವಳನ್ನು ಬಲಾತ್ಕಾರದಿಂದ ಅಪಹರಿಸಿದ್ದರಿಂದ,

ಕರ್ಣ ದುರ್ಯೋಧನಾದಿಗಳು ಯುದ್ಧ ಮಾಡಿದರು ಬಹಳ ಕೋಪದಿಂದ.

 

ಕೃಚ್ಛ್ರೇಣ ತಂ ವಿರಥೀಕೃತ್ಯ ಚೈಕಂ ಸರ್ವೇ ಸಮೇತಾ ಜಗೃಹುರ್ದ್ಧಾರ್ತ್ತರಾಷ್ಟ್ರಾಃ ।

ಕರ್ಣ್ಣೇನ ಭೂರಿಶ್ರವಸಾ ಚ ಸಾರ್ದ್ಧಂ ಬಾಹ್ವೋರ್ಬಲಾದೇವ ದುರ್ಯ್ಯೋಧನಸ್ಯ             ॥೨೨.೨೩೮॥

 

ಕರ್ಣ, ಭೂರಿಶ್ರವಸ್ಸು ಮತ್ತು ದುರ್ಯೋಧನ ಈ ಮೂರುಜನ,

ತಮ್ಮ ತೋಳ್ಬಲದಿಂದ ಸಾಂಬನನ್ನು ಮಾಡಿದರು ರಥವಿಹೀನ.

ಕಷ್ಟದಿಂದಲೇ ಅವರುಗಳು ಮಾಡಿದರು ಸಾಂಬನ ಬಂಧನ.

No comments:

Post a Comment

ಗೋ-ಕುಲ Go-Kula