Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 390-398

 

ಅಗ್ರೇ ಕೃಷ್ಣಾಂ ಯೋSವದತ್ ಸಿನ್ಧುರಾಜಂ ಯಾಹೀತಿ ತಂ ಕೋಟಿಕಾಶ್ಯಂ ಸುಪಾಪಮ್ ।

ಛಿತ್ವಾ ಶಿರೋ ಮೃತ್ಯವೇ ಭೀಮಸೇನೋ ನಿವೇದಯಾಮಾಸ ತಮಃ ಸ ಚಾಗಾತ್ ॥೨೨.೩೯೦॥

ಮೊದಲು ದ್ರೌಪದಿಯ ಬಳಿ ಸಾರಿ 'ನೀನು ಜಯದ್ರಥನ ಮದುವೆಯಾಗು' ಎಂದವನು ಕೋಟಿಕಾಶ್ಯ,

ಅವನ ತಲೆ ಕತ್ತರಿಸಿದ ಭೀಮಸೇನ ; ಪಾಪಿಷ್ಠ ನೀಚ ಕೋಟಿಕಾಶ್ಯಗೆ ಸಂದದ್ದು ಅಂಧಂತಮಸ್ಸಿನ ವಾಸ.

 

ಹತ್ವಾ ಸೇನಾಮಖಿಲಾಂ ಸೈನ್ಧವಸ್ಯ ಭೀಮಾರ್ಜ್ಜುನೌ ಸಯಮಂ ಧರ್ಮ್ಮರಾಜಮ್ ।

ವಿಸೃಜ್ಯ ಧಾವನ್ತಮಥಾನುಜಗ್ಮತುರ್ಜ್ಜಯದ್ರಥಂ ವಿರಥಂ ಫಲ್ಗುನೋSಕಃ ॥೨೨.೩೯೧॥

ಜಯದ್ರಥನ ಎಲ್ಲಾ ಸೇನೆಯನ್ನು ಭೀಮ ಅರ್ಜುನರು ಕೊಲ್ಲುತ್ತಾರೆ,

ಧರ್ಮರಾಯ ನಕುಲ ಸಹದೇವರನ್ನು ತಮ್ಮ ಆಶ್ರಮಕ್ಕೆ ಕಳುಹಿಸುತ್ತಾರೆ.

ಬೆನ್ನಟ್ಟಿ ಹೋಗುತ್ತಾರೆ -ರಥವೇರಿ ಹೋಗುತ್ತಿದ್ದ ಜಯದ್ರಥನನ್ನ,

ಅರ್ಜುನ ಮಾಡುತ್ತಾನೆ -ನೀಚ ಜಯದ್ರಥನನ್ನು ರಥವಿಹೀನ.

 

ಪದ್ಭ್ಯಾಂ ಧಾವನ್ತಮ್  ಭೀಮಸೇನೋ ನಿಗೃಹ್ಯ ದತ್ವಾ ಪ್ರಹಾರಾಂಶ್ಚ ಭೃಶಂ ತಮಾರ್ತ್ತಮ್ ।

ಆದಾಯಾಧಾದ್ ದ್ರೌಪದೀಪಾದಯೋಶ್ಚ ತಂ ಮೋಚಯಾಮಾಸ ಚ ಧರ್ಮ್ಮಸೂನುಃ ॥೨೨.೩೯೨॥

ರಥಹೀನ ಜಯದ್ರಥನದು ಬರಿಗಾಲ ಭಯದ ಓಟ,

ಭೀಮ ಅವನ ಹಿಡಿದು ಬಲವಾದ ಗುದ್ದುಗಳನ್ನು ಕೊಟ್ಟ.

ಆರ್ತನಾದ ಅವನನ್ನು ದ್ರೌಪದಿಯ ಪಾದದಿ ಕೆಡವಿದ,

ಆಗ ಧರ್ಮರಾಜ ಜಯದ್ರಥನನ್ನು ಬಿಡುಗಡೆ ಮಾಡಿದ.

 

ದಾಸೋ ದ್ರೌಪದ್ಯಾ ಅಹಮಿತ್ಯೇವ ವಾಕ್ಯೇ ತೇನೈವೋಕ್ತೇ ಭೀಮಸೇನೋSಪ್ಯಮುಞ್ಚತ್ ।

ಸ ಬ್ರೀಳಿತೋSವಾಗ್ವದನೋ ಯಯೌ ವನಂ ಪಾರ್ತ್ಥಾಶ್ಚ ತತ್ರೋಷುರತಿಪ್ರಮೋದಿನಃ ॥೨೨.೩೯೩॥

ನಾನು ದ್ರೌಪದಿಯ ದಾಸನೆಂದು ಜಯದ್ರಥ ಹೇಳಿದ,

ಭೀಮಸೇನ ಅವನನ್ನು ಉದಾರತೆಯಿಂದ ಕ್ಷಮಿಸಿದ.

ಬಹಳಷ್ಟು ಅವಮಾನಿತನಾದ ಜಯದ್ರಥ, ತಲೆತಗ್ಗಿಸಿ, ತಪಸ್ಸಿಗಾಗಿ ಹೊರಟ ಕಾಡಿನತ್ತ. ಪಾಂಡವರ ಆಶ್ರಮವಾಸವಾಗಿತ್ತು ಆನಂದಯುಕ್ತ.

 

ಮಾರ್ಕ್ಕಣ್ಡೇಯಸ್ತದಾSSಗತ್ಯ ತೇಷಾಮಕಥಯತ್ ಕಥಾಃ ।

ಬಹ್ವ್ಯಶ್ಚೈವ ವಿಚಿತ್ರಾಶ್ಚ ಭಾಷಾತ್ರಯಸಮನ್ವಿತಾಃ ॥೨೨.೩೯೪॥

ಅದೇ ಸಮಯದಲ್ಲಿ ಮಾರ್ಕಂಡೇಯ ಮುನಿಗಳು ಅಲ್ಲಿಗೆ ಬರುತ್ತಾರೆ,

ಬಹಳ ಅಚ್ಚರಿ ಕೊಡುವ, ಮೂರು ಭಾಷೆಯ  ಕಥೆಗಳನ್ನು ಹೇಳುತ್ತಾರೆ.

 

[ಮಾರ್ಕಂಡೇಯ ಸಮಾಸ್ಯಾಪರ್ವ, ಮೊದಲಾದವುಗಳಲ್ಲಿ ಬಹಳ ಕಥೆಗಳಿವೆ. ಆ ಕಥೆಗಳನ್ನು ಯಥಾರ್ಥವಾಗಿ ಹೇಗೆ ಹೇಳಿದ್ದಾರೋ ಹಾಗೇ ತೆಗೆದುಕೊಳ್ಳಬಾರದು ಎಂದು ಹೇಳುತ್ತಾರೆ. ಹಾಗಿದ್ದರೆ ಯಾವುದನ್ನು ಸ್ವೀಕರಿಸಬೇಕು ಎಂದರೆ:]

 

ಲೋಕದರ್ಶನಮಾಶ್ರಿತ್ಯ ದೇವಾಶ್ಚ ಮುನಯಸ್ತಥಾ ।

ಬ್ರೂಯುಃ ಕಥಾಸ್ತತ್ರ ಶಿಕ್ಷಾ ಗ್ರಾಹ್ಯಾ ನಾರ್ತ್ಥಾಃ ಕಥಞ್ಚನ ॥೨೨.೩೯೫॥

ಲೋಕ ಅಥವಾ ಪ್ರಜೆಗಳು ಕಂಡ ದರ್ಶನದ ರೀತಿ,

ದೇವತೆ ಮತ್ತು ಮುನಿಗಳ ಕಥೆ ಹೇಳುವ ಪ್ರತೀತಿ.

ಸ್ವೀಕರಿಸಬೇಕಲ್ಲಿ ಕಥೆಯ ನೀತಿ,

ಸ್ವೀಕರಿಸಬಾರದು ಅರ್ಥದ ರೀತಿ.

 

[ಮಹಾಭಾರತದಲ್ಲಿ ಇಂತಹ ಕಥೆಗಳು ಬಂದಿವೆ. ಉದಾಹರಣೆಗೆ ಅಲ್ಲಿ ಗರುಡನ ಮಾನಭಂಗವಿದೆ. ಗರುಡ ಒಬ್ಬ ಸಾಮಾನ್ಯ ಸ್ತ್ರೀಯ ಮುಂದೆ ಸೋಲನ್ನು ಒಪ್ಪುತ್ತಾನೆ! ಹಾಗೇ ನಳ ಕಲಿಯನ್ನು ನಿಗ್ರಹಿಸುವ ಕಥೆ,  ಇತ್ಯಾದಿ. ಅದು ಲೋಕದ ದರ್ಶನ. ಈ ಎಲ್ಲಾ ಕಥೆಗಳು ಲೌಕಿಕ ನೀತಿಯನ್ನು ಹೇಳುತ್ತವೆಯೇ ವಿನಃ, ಇದು ಇತಿಹಾಸವೂ ಅಲ್ಲಾ, ದೇವತೆಗಳ ಸ್ವರೂಪ ನಿರ್ಣಯವೂ ಅಲ್ಲ. ದೇವತೆಗಳ ಸ್ವರೂಪ ನಿರ್ಣಯ ಇರುವುದು ಪಾಂಡವರ ಕಥೆಯಲ್ಲಿ. ಕೃಷ್ಣಾವತಾರದ ಕಥೆಯೇ ನಿರ್ಣಾಯಕ].

 

ಅರ್ತ್ಥಃ ಸಮಾಧಿಭಾಷಾಸು ಗ್ರಾಹ್ಯಃ ಸರ್ವೋSಪ್ಯಸಂಶಯಮ್ ।

ಪರದರ್ಶನಭಾಷಾಸು ಜ್ಞೇಯಂ ತದ್ದರ್ಶನಂ ತಥಾ ॥೨೨.೩೯೬॥

ಇದ್ದಂತೆ ಹೇಳುವ ಭಾಷೆಯಲ್ಲಿಯದು ನಿಸ್ಸಂಶಯವಾಗಿ ಗ್ರಾಹ್ಯ,

ಪರದರ್ಶನದಲ್ಲಿ ಹೇಳಿರುವ ಭಾಷೆಯದು ಅವೈದಿಕ ಅಗ್ರಾಹ್ಯ.

 

ಗ್ರಾಹ್ಯೋ ನಾರ್ತ್ಥೋ  ವೈದಿಕಂ ತು ದರ್ಶನಂ ಗ್ರಾಹ್ಯಮೇವ ಚ ।

ಅನ್ಯಾರ್ತ್ಥೋ ಗುಹ್ಯಭಾಷಾಸು ಗ್ರಾಹ್ಯ ಏವಂ ವಿನಿರ್ಣ್ಣಯಃ ॥೨೨.೩೯೭॥

ಹೀಗೇ, ದರ್ಶನಭಾಷೆಯದ್ದೂ ತೀರ್ಮಾನ,

ಸ್ವೀಕರಿಸಬೇಕಾದದ್ದು ವೈದಿಕವಾದ ದರ್ಶನ.

ಗುಹ್ಯಭಾಷೆಯದು ಕಾಣುವುದಕ್ಕಿಂತ ಇರುವ ಅರ್ಥ ಬೇರೆ,

ವಿವೇಚಿಸಿ ಅರ್ಥೈಸಬೇಕು -ಇದು ಶಾಸ್ತ್ರನಿರ್ಣಯದ ಧಾರೆ.

 

ಜಯದ್ರಥಸ್ತು ಭೀಮೇನ ತದಾ ಪಞ್ಚಶಿಖೀಕೃತಃ ।

ತಪಸಾ ಶಿವಮಾರಾದ್ಧ್ಯ ವವ್ರೇ ಪಾಣ್ಡವರೋಧನಮ್ ।

ಋತೇSರ್ಜ್ಜುನಾದರ್ಜ್ಜುನಸ್ಯ ತುಷ್ಟೋ ಹಿ ತಪಸಾ ಶಿವಃ ॥೨೨.೩೯೮॥

ಭೀಮಸೇನ ಜಯದ್ರಥನ ತಲೆ ಬೋಳಿಸಿ ಐದು ಜುಟ್ಟುಗಳನ್ನು ಬಿಟ್ಟ,

ಅವಮಾನಿತ ಜಯದ್ರಥ ಶಿವನಾರಾಧಿಸಿ ಪಾಂಡವರ ತಡೆವ ಬೇಡಿಕೆ ಇಟ್ಟ.

ಆಗತಾನೇ ಅರ್ಜುನನ ತಪಸ್ಸಿನಿಂದ ಸಂತುಷ್ಟನಾಗಿದ್ದ ರುದ್ರ,

ಕೊಟ್ಟನವನಿಗೆ ಅರ್ಜುನನ ಬಿಟ್ಟು ಅನ್ಯರ ತಡೆವ ಸಾಮರ್ಥ್ಯದ ವರ.

No comments:

Post a Comment

ಗೋ-ಕುಲ Go-Kula