Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 300-307

 

[ಭೀಮಸೇನನ ಸಾಮರ್ಥ್ಯದ ಕುರಿತು ಹೇಳುತ್ತಾರೆ:]

 

‘ವಾತೇನ ಕುನ್ತ್ಯಾಂ ಬಲವಾನ್ ಸ ಜಾತಃ ಶೂರಸ್ತಪಸ್ವೀ ದ್ವಿಷತಾಂ ನಿಹನ್ತಾ ।

‘ಸತ್ಯೇ ಚ ಧರ್ಮ್ಮೇ ಚ ರತಃ ಸದೈವ ಪರಾಕ್ರಮೇ ಶತ್ರುಭಿರಪ್ರಧೃಷ್ಯಃ’ ॥೨೨.೩೦೦॥

ಆ ಭೀಮಸೇನನು ಮುಖ್ಯಪ್ರಾಣನಿಂದ ಕುಂತೀದೇವಿಯಲ್ಲಿ ಜನಿಸಿದಾತ,

ಜ್ಞಾನಿ,ಸತ್ಯಧರ್ಮರತ,ಹಗೆಗಳ ಕೊಲ್ಲುವಾತ ಶತ್ರುಗಳಿಗೆ ಸೋಲದ ಪರಾಕ್ರಮವಂತ.

 

ತತ್ರಾಪರಾಂಶ್ಚೈವ ಬಹೂನಸತ್ಯಂ ನಿರೀಶ್ವರಂ ಚಾಪ್ರತಿಷ್ಠಂ ಚ ಲೋಕಮ್ ।

ಸಿದ್ಧೋsಹಮೀಶೋsಹಮಿತಿ ಬ್ರುವಾಣಾನ್ ಗುಣಾನ್ ವಿಷ್ಣೋಃ ಖ್ಯಾಪಯನ್ ವಾದತೋsಜೈತ್ ॥೨೨.೩೦೧॥

ಜಗತ್ತು ಅಸತ್ಯ, ಭಗವಂತ ಜಗದೊಡೆಯನಲ್ಲ ಎಂಬ ವಾದ ಸೌಗಂಧಿಕವನದಲ್ಲಿ,

ಬೇಕಾದ್ದನ್ನು ಪಡೆದಿದ್ದೇನೆ,ನಾನೇ ಒಡೆಯ,ಬ್ರಹ್ಮ, ದೇವನೆಂಬ ದೈತ್ಯರದೇ ಹಾವಳಿ.

ನಾರಾಯಣ ಸರ್ವೋತ್ತಮ, ಸರ್ವೋತ್ಕೃಷ್ಟ, ಜ್ಞಾನಾನಂದ ಪರಿಪೂರ್ಣ,

ನೀವ್ಯಾರೂ ಅಲ್ಲ ಎಂದು ಪ್ರತಿಪಾದಿಸಿ ಗೆಲುವು ಸಾಧಿಸಿದ ಭೀಮಸೇನ.

 

ಭಿನ್ನಂ ವಿಷ್ಣುಮಧಿಕಂ ಸರ್ವತಶ್ಚ ಬ್ರುವನ್ ಪ್ರವೀರಾನ್ ಲಕ್ಷಮೇಷಾಂ ನಿಜಘ್ನೇ ।

‘ತೇ ತಸ್ಯ ವೀರ್ಯಂ ಚ ಬಲಂ ಚ ದೃಷ್ಟ್ವಾ ವಿದ್ಯಾಬಲಂ ಬಾಹುಬಲಂ ತಥೈವ ।

‘ಅಶಕ್ನುವನ್ತಃ ಸಹಿತಾಃ ಸಮಸ್ತಾ ಹತಪ್ರವೀರಾಃ ಸಹಸಾ ನಿವೃತ್ತಾಃ’ ॥೨೨.೩೦೨॥

ನಮಗಿಂತ ಆ ತತ್ವ ಭಿನ್ನ, ಎಲ್ಲರಿಗಿಂತಲೂ ನಾರಾಯಣ ಮಿಗಿಲು,

ಇದ ಸಾಧಿಸುತ್ತಾ ಭೀಮ ಕೊಂದಿದ್ದು ಲಕ್ಷ ಲಕ್ಷ ರಕ್ಕಸರ ಸಾಲು.

ಭೀಮನ ತಾಕತ್ತು ಭೀಮನ ವಿದ್ವತ್ತು ಸಹಿಸಲಾರದವರು,

ಎಷ್ಟೋ ಜನ ಸತ್ತರು, ಉಳಿದವರಲ್ಲಿಂದ ಪಲಾಯನಗೈದರು.

 

ವಿಕ್ರಮ್ಯ ತಾನ್ ಗದಯಾsಸೌ ನಿಹತ್ಯ ವಿದ್ರಾಪ್ಯ ಸರ್ವಾನ್ ನಳಿನೀಂ ಪ್ರವಿಶ್ಯ ।

ಪೀತ್ವಾsಮೃತಾಮ್ಭಶ್ಚ ತತೋsಮ್ಬುಜಾನಿ ದಿವ್ಯಾನಿ ಜಗ್ರಾಹ ಕುರುಪ್ರವೀರಃ ॥೨೨.೩೦೩॥

ಅವರೆಲ್ಲರ ಎದುರಿಸಿದ ಭೀಮಸೇನ ಗದೆಯಿಂದ ಅವರ ಕೊಂದ,

ಓಡಿಸಿ,ಸರೋವರಕ್ಕಿಳಿದು ಅಮೃತಸದೃಶವಾದ ನೀರನ್ನು ಕುಡಿದ.

ಸರೋವರದಲ್ಲಿನ ಅಲೌಕಿಕವಾದ ತಾವರೆಗಳನ್ನು ಹಿಡಿದುಕೊಂಡ.

 

ಅಥೋ ಕಲಹಶಂಸೀನಿ ನಿಮಿತ್ತಾನಿ ಯುಧಿಷ್ಠಿರಃ ।

ದೃಷ್ಟ್ವಾ ಕೃಷ್ಣಾಮಪೃಚ್ಛಚ್ಚ ಕ್ವ ಭೀಮ ಇತಿ ದೀನಧೀಃ ॥೨೨.೩೦೪॥

ಇತ್ತಕಡೆ ಯುಧಿಷ್ಠಿರ ಯುದ್ಧ ಶಕುನಗಳ ಕಂಡವನಾದ,

ಕಳವಳದಿಂದ ದ್ರೌಪದಿಯನ್ನು ಭೀಮನೆಲ್ಲೆಂದು ಕೇಳಿದ.

 

ಸೌಗನ್ಧಿಕಾರ್ತ್ಥಂ ಯಾತಂ ತಂ ಶ್ರುತ್ವಾ ಕೃಷ್ಣಾಮುಖಾನ್ನೃಪಃ ।

ಆರುಹ್ಯ ರಾಕ್ಷಸಶ್ರೇಷ್ಠಾನ್ ಕೃಷ್ಣಯಾ ಭ್ರಾತೃಭಿಃ ಸಹ ॥೨೨.೩೦೫॥

 

ಯಯೌ ವೃಕೋದರೋ ಯತ್ರ ದೃಷ್ಟ್ವಾ ಚೈನಮವಸ್ಥಿತಮ್ ।

ಉವಾಚ ಮೈವಮಿತ್ಯೇನಂ ಭೀತೋ ಗಿರಿಶಕೋಪತಃ ॥೨೨.೩೦೬॥

ದ್ರೌಪದಿಯಿಂದ ಧರ್ಮರಾಜ ಭೀಮ ಸೌಗಂಧಿಕೆಗಾಗಿ ಹೋಗಿದ್ದ ಮಾಹಿತಿ ಅರಿತ,

ಘಟೋತ್ಕಚ;ರಕ್ಕಸರನ್ನೇರಿ ದ್ರೌಪದಿ ತಮ್ಮಂದಿರ ಕೂಡಿ ಹೊರಟ ಭೀಮನಿದ್ದ ಜಾಗದತ್ತ.

ಅಲ್ಲಿ ಭೀಮಸೇನ ನಿಂತುಕೊಂಡಿದ್ದ ಅತ್ಯಂತ ನಿರ್ಭೀತನಾಗಿ,

ನೀನ್ಹೀಗೆ ಮಾಡಬಾರದಿತ್ತೆಂದ, ಶಿವ ಸಿಟ್ಟಾದಾನೆಂಬ ಕಾರಣಕ್ಕಾಗಿ.

 

ದೇವೇಭ್ಯೋ ಮರಣಾದ್ ಭೀತಾ ರಾಕ್ಷಸಾ ವಿತ್ತಪಾಜ್ಞಯಾ ।

ತದೀಯಾಂ ನಳಿನೀಂ ತೇ ಹಿ ರಕ್ಷನ್ತ್ಯಸ್ಯಾsಶ್ರಯೋ ಹರಃ ।

ಜಾನನ್ ವಿತ್ತೇಶ್ವರೋ ಭೀಮಮಾಹಾತ್ಮ್ಯಂ ನ ಚುಕೋಪ ಹ ॥೨೨.೩೦೭॥

 ದೇವತೆಗಳಿಂದ ಸಾವಿನ ಭಯದಲ್ಲಿದ್ದ ಅಲ್ಲಿನ ರಾಕ್ಷಸರು,

ಕುಬೇರನಾಜ್ಞೆಯಂತೆ ಅವನ ಸರೋವರ ರಕ್ಷಿಸುತ್ತಿದ್ದರು.

ಕುಬೇರನಿಗೆ ಆಶ್ರಯದಾತನಾದವನು ಮಹಾರುದ್ರದೇವ,

ಭೀಮ ಮಹಾತ್ಮ್ಯ ತಿಳಿದ ಕುಬೇರಗೆ ಬರಲಿಲ್ಲ ಕೋಪಭಾವ.

No comments:

Post a Comment

ಗೋ-ಕುಲ Go-Kula