Sunday 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 415-420

 

ಸಮೀಪಮಾಗತ್ಯ ಪೃಥಾಸುತಾನಾಂ ಪರಿಭೂತಂ ವಃ ಕುಲಂ ಶಕ್ರಭೃತ್ಯೈಃ ।

ಧೃತಃ ಸಭಾರ್ಯ್ಯಃ ಸಾನುಜೋ ಧಾರ್ತ್ತರಾಷ್ಟ್ರಸ್ತಂ ಮೋಚಯಧ್ವಂ ಭ್ರಾತರಂ ಭಾರತಾಗ್ರ್ಯಾಃ ॥೨೨.೪೧೫॥

ಪಾಂಡವರ ಬಳಿ ಧಾವಿಸಿ ಬರುತ್ತಾರೆ ದುರ್ಯೋಧನನ ಮಂತ್ರಿಗಳು,

ಹೇಳುತ್ತಾರೆ -ಇಂದ್ರ ಭೃತ್ಯರಿಂದ ನಿಮ್ಮ ಕುಲಕ್ಕಾಗಿದೆ ಭಾರೀ ಸೋಲು.

ಇದು ನಿಮ್ಮ ವಂಶಕ್ಕಾಗಿರುವಂಥ ಬಹುದೊಡ್ಡ ಅವಮಾನ,

ಹೆಂಡಂದಿರು ತಮ್ಮಂದಿರೊಡನೆ ಸೆರೆಯಾಗಿದ್ದಾನೆ ದುರ್ಯೋಧನ.

ಭರತಕುಲಶ್ರೇಷ್ಠರೇ ಹೋಗಿ ಬಿಡಿಸಿಕೊಳ್ಳಿರಿ ನಿಮ್ಮ ಕುಲವನ್ನ.

 

ಇತ್ಯುಕ್ತ ಊಚೇ ಭೀಮಸೇನೋSಗ್ರಜಂ ಸ್ವಂ ಜಾನೇ ರಾಜನ್ ಯಾದೃಶೋSಯಂ ವಿಮರ್ದ್ದಃ ।

ಐಶ್ವರ್ಯ್ಯಂ ಸ್ವಂ ದರ್ಶಯನ್ ನಃ ಸಮಾಗಾದ್ ದುರ್ಯ್ಯೋಧನಸ್ತೇಜಸೋ ಭಙ್ಗಮಿಚ್ಛನ್ ॥೨೨.೪೧೬॥

ಇದನ್ನು ಕೇಳಿದ ಭೀಮಸೇನ ಹೇಳುತ್ತಾನೆ,

ರಾಜ, ಇದರ ಹಿಂದಿನ ಕಾರಣ ನಾನು ತಿಳಿದಿದ್ದೇನೆ.

ಇದು ಅವನ ಗತ್ತು ಐಶ್ವರ್ಯ ಅಧಿಕಾರದ ಪ್ರದರ್ಶನ,

ನಮ್ಮನ್ನವಮಾನಿಸಲೆಂದೇ ಬಂದಿರುವ ದುರ್ಯೋಧನ.

 

ವಿಜ್ಞಾಯ ತೇಷಾಂ ಮನ್ತ್ರಿತಂ ವಜ್ರಬಾಹುರೇತಚ್ಚಕ್ರೇ ನಾತ್ರ ನಃ ಕಾರ್ಯ್ಯಹಾನಿಃ ।

ದಿವ್ಯಂ ಜ್ಞಾನಂ ಸ್ವಾತ್ಮನೋ ದರ್ಶಯನ್ ಸ ಏತಾವದುಕ್ತ್ವಾ ವಿರರಾಮ ಭೀಮಃ ॥೨೨.೪೧೭॥

ಹೀಗಿದೆ ದುರ್ಯೋಧನಾದಿಗಳ ಕೆಟ್ಟ ಆಲೋಚನೆ,

ಇದ ತಿಳಿದ ಇಂದ್ರ ಮಾಡಬೇಕಾದ್ದನ್ನೇ ಮಾಡಿದ್ದಾನೆ.

ಈ ವಿಷಯದಲ್ಲಿ ನಮಗಾಗಿಲ್ಲ ಯಾವುದೇ ಕಾರ್ಯಹಾನಿ,

ಇದನ್ನು ವಿವರಿಸಿ ಸುಮ್ಮನಾದ ಭೀಮಸೇನ ದಿವ್ಯಜ್ಞಾನಿ.

 

ಏಕಾಹಯಜ್ಞೇ ದೀಕ್ಷಿತೇನೈವ ರಾಜ್ಞಾ ಸಮ್ಪ್ರೇಷಿತೋ ಭೀಮಸೇನೋSರ್ಜ್ಜುನಶ್ಚ ।

ಸಮಾದ್ರೇಯೌ ಚಿತ್ರಸೇನಂ ರಣೇ ತೌ ವಿಜಿತ್ಯ ದುರ್ಯ್ಯೋಧನಮಾಶ್ವಮುಞ್ಚತಾಮ್ ॥೨೨.೪೧೮॥

ಒಂದು ದಿನದ ಯಜ್ಞದಲ್ಲಿ ದೀಕ್ಷಿತನಾದ ಯುಧಿಷ್ಠಿರ ತಾನು,

ಭೀಮ, ಅರ್ಜುನ, ನಕುಲ ಸಷದೇವರನ್ನು ಕಳುಹಿಸಿದನು.

ಅವರು ಚಿತ್ರಸೇನನನ್ನು ಎದುರಿಸಿ ಗೆಲ್ಲುತ್ತಾರೆ,

ಸೆರೆಯಾದ ದುರ್ಯೋಧನಾದಿಗಳ ಬಿಡಿಸುತ್ತಾರೆ.

 

ಸ ಚಿತ್ರಸೇನೋ ವಾಸವೋಕ್ತಂ ಚ ಸರ್ವಂ ಕುಮನ್ತ್ರಿತಂ ಧಾರ್ತ್ತರಾಷ್ಟ್ರಸ್ಯ ಚಾSಹ ।

ಪಾರ್ತ್ಥಸ್ಯ ಭೀಮಸ್ಯ ಚ ತನ್ನಿಶಮ್ಯ ಸುಬ್ರೀಳಿತೋ ಧೃತರಾಷ್ಟ್ರಾತ್ಮಜೋSಭೂತ್ ॥೨೨.೪೧೯॥

ಚಿತ್ರಸೇನ;ಇಂದ್ರ ಹೇಳಿದ ದುರ್ಯೋಧನನ ದುರಾಲೋಚನೆಗಳ ಹೇಳುತ್ತಾನೆ,

ಭೀಮಾರ್ಜುನರು ಅದನ್ನು ಕೇಳಿಸಿಕೊಂಡಾಗ ದುರ್ಯೋಧನ ನಾಚಿಕೆ ಪಡುತ್ತಾನೆ.

 

ಸಮಾಪ್ಯ ಯಜ್ಞಂ ಚ ತತೋSಭಿಯಾತಂ ಸರ್ವೇ ಪ್ರಾಪುರ್ದ್ದರ್ಮ್ಮರಾಜಂ ಸ ಚಾSಶು ।

ಸಮ್ಪೂಜ್ಯ ತೂತ್ಸೃಜ್ಯ ಚ ಚಿತ್ರಸೇನಮೂಚೇ ಗಾನ್ಧಾರೇ ನ ಪುನಃ ಕಾರ್ಯ್ಯಮೀದೃಕ್ ॥೨೨.೪೨೦॥

ಯಜ್ಞ ಮುಗಿಸಿ ಬರುತ್ತಿದ್ದ ಧರ್ಮರಾಜನಲ್ಲಿಗೆ ಎಲ್ಲರೂ ಬಂದು ಸೇರುತ್ತಾರೆ,

ಧರ್ಮಜ ಚಿತ್ರಸೇನನ ಸತ್ಕರಿಸಿ ಕಳಿಸಿ,ಗಾಂಧಾರಿ ಪುತ್ರಗೆ ಕೊಟ್ಟ ಹಿತವಚನದ ಧಾರೆ.

No comments:

Post a Comment

ಗೋ-ಕುಲ Go-Kula