Saturday 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 157-166

 

[ಅರ್ಜುನ ಇಂದ್ರಲೋಕದಲ್ಲಿ ಅಭ್ಯಾಸ ಮಾಡುತ್ತಿರುವ ಆ ಕಾಲದಲ್ಲಿ ಇತ್ತ ದ್ವಾರಕೆಯಲ್ಲಿ ಏನು ಘಟನೆ ನಡೆಯಿತು ಎನ್ನುವುದನ್ನು ವಿವರಿಸುತ್ತಾರೆ:]

 

ಸುಭದ್ರಯಾSಭಿಮನ್ಯುನಾ ಸಹ ಸ್ವಕಾಂ ಪುರಂ ಗತಃ ।

ಜನಾರ್ದ್ದನೋSತ್ರ ಸಂವಸನ್ ಕದಾಚಿದಿತ್ಥಮೈಕ್ಷತ      ॥೨೨.೧೫೭॥

 

ಮಯಾ ವರೋ ಹಿ ಶಮ್ಭವೇ ಪ್ರದತ್ತ ಆಸ ಪೂರ್ವತಃ ।

ವರಂ ಗ್ರಹೀಷ್ಯ ಏವ ತೇ ಸಕಾಶತೋ ವಿಮೋಹಯನ್  ॥೨೨.೧೫೮॥

ಸುಭದ್ರೆ ಅಭಿಮನ್ಯುವಿನೊಂದಿಗೆ ದ್ವಾರಕೆಯ ತಲುಪಿದ ಜನಾರ್ದನ,

ದ್ವಾರಕೆಯಲ್ಲೇ ವಾಸಿಸುತ್ತಿರುವಾಗ ಹೀಗೆಂದು ಯೋಚಿಸಿತವನ ಮನ.

 

ನಾನು ಮೋಹನಾರ್ಥವಾಗಿ ರುದ್ರನಿಂದ ವರವ ಪಡೆಯುವೆ,

ಈ ಸಂಬಂಧವಾಗಿ ರುದ್ರಾ, ನೀನಾಗಲೇ ವರವ ಪಡೆದಿರುವೆ.

 

[ಈ ಮಾತಿಗೆ ಪೂರಕವಾಗಿರುವ ಇತರ ಪುರಾಣದ ವಚನವನ್ನು ಆಚಾರ್ಯರು ಇಲ್ಲಿ ಉಲ್ಲೇಖಿಸುತ್ತಾರೆ:]

 

‘ತ್ವಾಮಾರಾಧ್ಯ ತಥಾ ಶಮ್ಭೋ ಗ್ರಹಿಷ್ಯಾಮಿ ವರಂ ಸದಾ ।

‘ದ್ವಾಪರಾದೌ ಯುಗೇ ಭೂತ್ವಾ ಕಲಯಾ ಮಾನುಷಾದಿಷು’ ॥೨೨.೧೫೯॥

ರುದ್ರಾ, ದ್ವಾಪರದಲ್ಲಿ ನಾನು ಮಾನುಷ ದೇಹದಿಂದ ಹುಟ್ಟಿ ಬರುವೆ,

ನಿನ್ನನ್ನು ಪೂಜಿಸಿ ಆರಾಧಿಸಿ ನಿನ್ನಲ್ಲಿ ವರವನ್ನು ಬೇಡಿಕೊಳ್ಳುವೆ.

 

ಇತಿ ವಾಕ್ಯಮೃತಂ ಕರ್ತ್ತುಮಭಿಪ್ರಾಯಂ ವಿಜಜ್ಞುಷೀ ।

ಪ್ರೀತ್ಯರ್ತ್ಥಂ ವಾಸುದೇವಸ್ಯ ರುಗ್ಮಿಣೀ ವಾಕ್ಯಮಬ್ರವೀತ್ ॥೨೨.೧೬೦॥

ಮೊದಲೇ ಹೇಳಿದ ದೈವವಾಕ್ಯವನ್ನು ಸತ್ಯವನ್ನಾಗಿ ಮಾಡಲು,

ದೈವಚಿತ್ತ ತಿಳಿದ ರುಗ್ಮಿಣಿ ದೈವಪ್ರೀತಿಗಾಗಿ ಹೀಗೆ ಹೇಳಿದಳು.

 

ಜಾತೇSಪಿ ಪುತ್ರೇ ಪುತ್ರಾರ್ತ್ಥಂ ಸಾ ಹಿ ವೇದ ಮನೋಗತಮ್ ।

ಪುತ್ರೋ ಮೇ ಬಲವಾನ್ ದೇವ ಸ್ಯಾತ್ ಸರ್ವಾಸ್ತ್ರವಿದುತ್ತಮಃ ॥೨೨.೧೬೧॥

ರುಗ್ಮಿಣಿ ಸದಾ ಭಗವದಭಿಪ್ರಾಯವನ್ನು ತಿಳಿದುಕೊಂಡಿರುವಾಕೆ,

ತೋರುತ್ತಾಳೆ-ಮಗನಿದ್ದರೂ ಕೂಡಾ ಮಗ ಬೇಕೆಂಬ ಬಯಕೆ.

ಸಕಲಾಸ್ತ್ರ ಬಲ್ಲ ಅಗ್ರಗಣ್ಯ ಮಗನಿಗಾಗಿ ಹರಿಯಲ್ಲಿ ಕೋರಿಕೆ.

 

 

ಇತ್ಯುಕ್ತೋ ಭಗವಾನ್ ದೇವ್ಯಾ ಸಮ್ಮೋಹಾಯ ಸುರದ್ವಿಷಾಮ್ ।

ಯಯೌ ಸುಪರ್ಣ್ಣಮಾರು̐ಹ್ಯ ಸ್ವೀಯಂ ಬದರಿಕಾಶ್ರಮಮ್ ॥೨೨.೧೬೨॥

ಇದನ್ನು ಕೇಳಿಸಿಕೊಂಡ ಶ್ರೀಕೃಷ್ಣ ದೈತ್ಯ ಮೋಹನಾರ್ಥ,

ರುಗ್ಮಿಣಿ ಸಹಿತ ಗರುಡನೇರಿ ಹೊರಟ ತನ್ನ ಬದರಿಯತ್ತ.

 

[ಈ ಮೇಲಿನ ವಿಷಯಕ್ಕೆ ಸಂಬಂಧಿಸಿದ ಪುರಾಣ ಶ್ಲೋಕವನ್ನು ಇಲ್ಲಿ ಆಚಾರ್ಯರು ಉಲ್ಲೇಖಿಸುತ್ತಾರೆ:]

 

‘ಏಷ ಮೋಹಂ ಸೃಜಾಮ್ಯಾಶು ಯೋ ಜನಾನ್ ಮೋಹಯಿಷ್ಯತಿ ।

‘ತ್ವಂ ಚ ರುದ್ರ ಮಹಾಬಾಹೋ ಮೋಹಶಾಸ್ತ್ರಾಣಿ ಕಾರಯ             ॥೨೨.೧೬೩॥

 

‘ಅತತ್ಥ್ಯಾನಿ ವಿತತ್ಥ್ಯಾನಿ ದರ್ಶಯಸ್ವ ಮಹಾಭುಜ ।

‘ಪ್ರಕಾಶಂ ಕುರು ಚಾSತ್ಮಾನಮಪ್ರಕಾಶಂ ಚ ಮಾಂ ಕುರು             ॥೨೨.೧೬೪॥

 

‘ಅಹಂ ತ್ವಾಂ ಪೂಜಯಿಷ್ಯಾಮಿ ಲೋಕಸಮ್ಮೋಹನೋತ್ಸುಕಃ ।

‘ತಮೋSಸುರಾ ನಾನ್ಯಥಾ ಹಿ ಯಾನ್ತೀತ್ಯೇತನ್ಮತಂ ಮಮ’             ॥೨೨.೧೬೫॥

 

ಇತ್ಯುಕ್ತವಚನಂ ಪೂರ್ವಂ ಕೇಶವೇನ ಶಿವಾಯ ಯತ್ ।

ತತ್ ಸತ್ಯಂ ಕರ್ತುಮಾಯಾತಂ ಕೃಷ್ಣಂ ಬದರಿಕಾಶ್ರಮಮ್ ।

ಸರ್ವಜ್ಞಾ ಮುನಯಃ ಸರ್ವೇ ಪೂಜಯಾಞ್ಚಕ್ರಿರೇ ಪ್ರಭುಮ್             ॥೨೨.೧೬೬॥

ದುರ್ಜನರಿಗೆ ಮೋಹ ಕೊಡುವ ನಾನು ಸರ್ವೋತ್ತಮ,

ಓ ರುದ್ರಾ, ಮಹಾಬಾಹು:ನೀನೂ ರಚಿಸು ಪಾಶುಪತಾಗಮ.

 

ಪರಾಕ್ರಮಿಯೇ, ಯಾವ್ಯಾವುದು ಸತ್ಯವಲ್ಲ,

ಪ್ರತಿಯೊಂದು ಸತ್ಯವಿರುದ್ಧವಾದಂಥ ಸೊಲ್ಲ,

ಅವುಗಳಿಂದ ನಿನ್ನ ಮೇಲೆ ಚೆಲ್ಲಿಕೋ ಬೆಳಕು,

ಆ ಭರಾಟೆಯಲ್ಲಿ ನನಗೆಳೆದುಬಿಡು ಮುಸುಕು.

 

ನಾನು ಲೋಕವನ್ನು ದಾರಿ ತಪ್ಪಿಸುವುದಕ್ಕೋಸ್ಕರ,

ಪೂಜೆಗಳ ಸಲ್ಲಿಸುತ್ತಿರುತ್ತೇನೆ : ಅದೆಲ್ಲ ನಿನ್ನ ಪರ.

ಇದನ್ನೇ ನಂಬಿದ ದೈತ್ಯರು ಹಿಡಿಯುತ್ತಾರೆ ಅಂಧಂತಮಸ್ಸಿನ ದಾರಿ,

ಹೀಗೆ ಮಾಡದಿದ್ದರೆ ಅವರು ತಮಸ್ಸಿಗೆ ಹೋಗಲ್ಲ ಎನ್ನುತ್ತಾನೆ ಶ್ರೀಹರಿ.

 

ಇವೆಲ್ಲವನ್ನೂ ಈ ಹಿಂದೆಯೇ ಭಗವಂತ ನುಡಿದದ್ದು,

ಅದ ಸತ್ಯ ಮಾಡಲೆಂದೇ ಬದರಿಕಾಶ್ರಮಕ್ಕೆ ಬಂದದ್ದು,

ಜ್ಞಾನಿ ಮುನಿಗಳೆಲ್ಲರೂ ಶ್ರೀಕೃಷ್ಣನನ್ನು ಅಲ್ಲಿ ಪೂಜಿಸಿದ್ದು.

No comments:

Post a Comment

ಗೋ-ಕುಲ Go-Kula